ಬಂಟ್ವಾಳ: ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾಗಲು ದಿನಗಣನೆ ಆರಂಭವಾಗಿದೆ, ಈ ಹಂತದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ತಯಾರಿ ಆರಂಭಿಸಿದ್ದರೆ, ದ.ಕ.ಜಿಲ್ಲಾಡಳಿತವೂ ವಿವಿಧ ಹಂತದಲ್ಲಿ ತಮ್ಮ ತಯಾರಿಯಲ್ಲಿ ತೊಡಗಿದ್ದಾರೆ.
ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಕಾರ್ಯೋನ್ಮುಖವಾಗಿರುವ ದ.ಕ. ಜಿಲ್ಲಾಡಳಿತ ಆಯ್ದ ಮತಗಟ್ಟೆಗಳಲ್ಲಿ (ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೊಸ ಪ್ರಯತ್ನ ನಡೆಸಿದೆ.
ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ ಕಂಬಳ ಸೇರಿದಂತೆ ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್, ನೀಲ ತರಂಗ, ಯುವ, ಸಖಿ, ವಿಕಲಚೇತನ ಈ ಎಂಟು ಪರಿಕಲ್ಪನೆಯಡಿ ಮತಗಟ್ಟೆ ಕೇಂದ್ರಳಾಗಿರುವ ಶಾಲೆಗಳನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಯೋಜನೆ ರೂಪಿಸಿರುವುದಾಗಿ ದ.ಕ.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ 13 ಶಾಲೆಗಳು,
ಬಂಟ್ವಾಳ ತಾಲೂಕಿನ 13 ಶಾಲೆಗಳಲ್ಲಿನ ಮತಗಟ್ಟೆಗಳಲ್ಲಿ ಬಣ್ಣದ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಿಂದ ಪಡಿಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ ಕೆದ್ದಳಿಕ ಸ.ಹಿ.ಪ್ರಾ.ಶಾಲೆಯಲ್ಲಿ ಯಕ್ಷಗಾನ ಮತಗಟ್ಟೆ, ನರಿಕೊಂಬು ಸ.ಹಿ.ಪ್ರಾ. ಶಾಲೆಯಲ್ಲಿ ನೀಲ ತರಂಗ ಮತಗಟ್ಟೆ, ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ ಹಾಗೂ ಶಾಲೆ ಕಕ್ಕೆಪದವು ಉಳಿಯಲ್ಲಿ ಕಂಬಳ ಮತಗಟ್ಟೆ, ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಪರಂಪರೆ ಮತ್ತು ಸಂಸ್ಕೃತಿ ಮತಗಟ್ಟೆ, ಸ.ಹಿ.ಪ್ರಾ. ಶಾಲೆ ಅನಂತಾಡಿಯಲ್ಲಿ ಗೋ ಗ್ರೀನ್ ಮತಗಟ್ಟೆ, ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಕಲ್ಲಡ್ಕದಲ್ಲಿ ಯುವ ಮತಗಟ್ಟೆ, ಸ.ಹಿ.ಪ್ರಾ ಶಾಲೆ ಮಾಣಿ, ನೇರಳಕಟ್ಟೆ, ಹಾಗೂ ಸರಕಾರಿ ಪ್ರೌಢಶಾಲೆ ಬೆಂಜನಪದವಿನಲ್ಲಿ ಸಖಿ ಮತಗಟ್ಟೆ ,ಸ.ಹಿ. ಪ್ರಾ. ಶಾಲೆ ಕೊಯಿಲಾ, ಶೇರಾ ಹಾಗೂ ಮಜಿ ಶಾಲೆಯಲ್ಲಿ ವಿಕಲಚೇತನ ಮತಗಟ್ಟೆ ಎಂದು ಗುರುತಿಸಲಾಗಿದ್ದು ಈ ಪರಿಕಲ್ಪನೆಯ ಚಿತ್ರಗಳು ಮೂಡಿಬರಲಿದೆ.
ಚಿತ್ರಕಲಾ ಶಿಕ್ಷಕರ ತಂಡ
ಮತಗಟ್ಟೆ ಕೇಂದ್ರಗಳಲ್ಲಿ ತಾಲೂಕಿನ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರ ತಂಡ ಚಿತ್ರ ಬಿಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೆದ್ದಳಿಕೆ ಮತ್ತಿತರ ಮತಗಟ್ಟೆಗಳಲ್ಲಿ ಈಗಾಗಲೇ ಚಿತ್ರ ಬಿಡಿಸುವ ಕಾರ್ಯ ಪೂರ್ಣಗೊಂಡಿದೆ. ಎಪ್ರಿಲ್ 10ರವರೆಗೆ ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯಲಿದೆ.
ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು, ಎಲ್ಲರೂ ಈ ಚುನಾವಣೆಯಲ್ಲಿ ಮುಕ್ತವಾಗಿ ಹಾಗೂ ಪಾರದರ್ಶಕವಾಗಿ ಭಾಗಿಯಾಗಬೇಕು ಎನ್ನುವ ಉದ್ದೇಶವನ್ನಿಟ್ಟು ಕೊಂಡು ಮತಗಟ್ಟೆಗಳನ್ನು ಚಿತ್ರಗಳ ಮೂಲಕ ಆಕರ್ಷಿಸುವ ಹೊಸ ಪ್ರಯೋಗವನ್ನು ಮಾಡಲಾಗಿದೆ. ಮತದಾರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ ಹಾಗೂ ಎಲ್ಲಿ ಮತದಾರ ಸಂಖ್ಯೆ ಕಡಿಮೆ ಇದೆಯೋ ಅಂತಹ ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಂಬಳ, ಯಕ್ಷಗಾನ, ನೀಲತರಂಗ, ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್ ಈ ಪರಿಕಲ್ಪನೆಯ ಮತಗಟ್ಟೆಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಲ್ಲಿ ಮಾತ್ರ ಅಳವಡಿಸಿಕೊಳ್ಳಲಾಗಿದೆ ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದ್ದಾರೆ.