ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಹೊರಗಿನ ಕ್ಷೇತ್ರದ ಮತದಾರರು. ರೈಯವರು ಕ್ಷೇತ್ರದ ಮೂಲೆ ಮೂಲೆಗೂ ಚಿರಪರಿಚಿತರು. ಪ್ರತಿಯೊಬ್ಬರನ್ನೂ ಕರೆದು ಮಾತನಾಡಿಸುವ ಗುಣ ಅವರದ್ದು, ಇಂತಹ ವ್ಯಕ್ತಿತ್ವವನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಕ್ಷೇತ್ರದ ಮತದಾರರ ಮೇಲಿದೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಕೆ.ಎಂ. ಇಬ್ರಾಹೀಂ ಹೇಳಿದರು.
ಅವರು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಾರೇ ಬಂದು ತಮ್ಮ ಮನೆಗಳದ್ದಾಗಲೀ, ಸಂಸ್ಥೆಗಳದ್ದಾಗಲೀ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ರೈಗಳು ತಪ್ಪದೆ ಭಾಗವಹಿಸುತ್ತಾರೆ. ಅದು ಅವರ ಸದ್ಗುಣ. ಎಷ್ಟೇ ಹೊತ್ತಾದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರು ತಪ್ಪಿಸಿಕೊಳ್ಳುವುದಿಲ್ಲ. ಇಂತಹ ಸರಳ, ಸಜ್ಜನಿಕೆಯ ವ್ಯಕ್ತಿಯನ್ನು ಈ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ನಾನು ಮತದಾರರಲ್ಲಿ ಕೋರುತ್ತೇನೆ ಎಂದು ಅವರು ವಿನಂತಿಸಿದರು.
ಕೆ.ಪಿ.ಸಿ.ಸಿ. ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಪರಿಶಿಷ್ಟ ಪಂಗಡಗಳ ಘಟಕದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್, ಮಹಿಳಾ ವಿಭಾದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪ್ರಮುಖರುಗಳಾದ ಅಬ್ಬಾಸ್ ಅಲಿ, ಮೊಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಜೆಸಿಂತಾ ಡಿಸೋಜಾ, ಪರಮೇಶ್ವರ್ ಮೂಲ್ಯ, ಬಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.