ಬಂಟ್ವಾಳ: ಶ್ರದ್ಧೆ, ನಿಷ್ಠೆಯಿಂದ ದುಡಿದ ಪರಿಣಾಮ ಹಾಗೂ ಕಳೆದ ೫ ವರ್ಷಗಳ ಅಭಿವೃದ್ಧಿ ಕಾರ್ಯ, ಶಾಂತಿ, ಸೌಹಾರ್ದಯುತ ಬಂಟ್ವಾಳ ನಿರ್ಮಾಣ ಈ ಬಾರಿಗೆಯ ಗೆಲುವಿಗೆ ಕಾರಣವಾಗಿದೆ ಎಂದು ಬಂಟ್ವಾಳದ ವಿಜೇತ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಗೆಲುವು ಸಾಧಿಸಿದ ಬಳಿಕ ಸುರತ್ಕಲ್ ಎನ್ ಐ ಟಿಕೆ ಯಲ್ಲಿ ಚುನಾಯಿತ ಶಾಸಕ ಪ್ರಮಾಣ ಪತ್ರ ಸ್ವೀಕರಿಸಿ, ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬಿ.ಸಿ.ರೋಡಿನ ಪಕ್ಷದ ಕಚೇರಿಗೆ ಆಗಮಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಬೇಕಾದ ಸ್ಥಿತಿ ಇದ್ದು, ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.
ಈ ಬಾರಿ ವಿರೋಧ ಪಕ್ಷದಲ್ಲಿದ್ದೇನೆ, ಆಡಳಿತ ಪಕ್ಷದಲ್ಲಿದ್ದರೆ ಹಿಂದಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಾಗುತ್ತಿತ್ತು. ಆದರೂ ಗರಿಷ್ಠ ಪ್ರಯತ್ನ ಮಾಡಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲಿದ್ದೇನೆ. ಜತೆಗೆ ಬಂಟ್ವಾಳದಲ್ಲಿ ಬಿಜೆಪಿಯಿಂದ ೨ನೇ ಬಾರಿಗೆ ಗೆದ್ದ ಮೊದಲ ಶಾಸಕನಾಗಿರುವುದಕ್ಕೆ ಹೆಚ್ಚು ಸಂತೋಷ ಪಡುತ್ತೇನೆ ಎಂದರು.
ನನ್ನ ಗೆಲುವಿನಲ್ಲಿ ಕಾರ್ಯಕರ್ತರ ಶ್ರಮ ಹಾಗೂ ಮತದಾರರ ಸಹಕಾರ ಪೂರಕವಾಗಿದ್ದು, ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿಕೆ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಮೆರವಣಿಗೆಯ ಮೂಲಕ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.