ಬೆಳ್ತಂಗಡಿ: ಪೆರಾಡಿಯಲ್ಲಿ ಬಿಜೆಪಿಯ ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ತಂಡ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಹಲ್ಲೆಗೊಳಗಾದ ವ್ಯಕ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದವರು ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿ ಎಂಬವರಾಗಿದ್ದಾರೆ. ವಿಜಯೋತ್ಸವ ಮೆರವಣಿಗೆಯ ಒಳಗೆ ಇವರನ್ನು ಎಳೆದುಕೊಂಡು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದ್ದು ಹಲ್ಲೆಗೆ ಒಳಗಾದ ಇವರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ಎದುರು ಜಮಾಯಿಸಿದ್ದರು.
ಮಾಜಿ ಶಾಸಕ ಕೆ ವಸಂತ ಬಂಗೇರ, ರಕ್ಷಿತ್ ಶಿವರಾಂ ಸೇರಿದಂತೆ ಹಲವರು ಮುಖಂಡರುಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ದಯಾನಂದ ಪೂಜಾರಿ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಘಟನೆಯ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.