ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಹಲವು ಗ್ರಾಮಗಳಲ್ಲಿ ಸಂಜೆ ಗಾಳಿ, ಗುಡುಗು ಸಹಿತ ಮಳೆ ಸುರಿದಿತ್ತು. ರಾತ್ರಿ 10ರ ಬಳಿಕ ಮತ್ತೆ ಭಾರಿ ಗುಡುಗು, ಸಿಡಿಲಿನೊಂದಿಗೆ ಒಂದು ತಾಸಿಗಿಂತ ಅಧಿಕ ಸಮಯ ಮಳೆಯಾಗಿದೆ.
ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ ಒಟ್ಟು 12 ವಿದ್ಯುತ್ ಕಂಬಗಳು ಗಾಳಿಗೆ ಮುರಿದು ಬಿದ್ದು ಎರಡು ಲಕ್ಷ ರೂ.ಗಿಂತ ಅಧಿಕ ಹಾನಿ ಸಂಭವಿಸಿದೆ. ಕಂಬಗಳು ಮುರಿದ ಕಾರಣ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಮುಂಡಾಜೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ರಾತ್ರಿ ಇಡೀ ವಿದ್ಯುತ್ ಪೂರೈಕೆ ಇರಲಿಲ್ಲ.
ನೆರಿಯ, ಚಾರ್ಮಾಡಿ ಮೊದಲಾದ ಪರಿಸರದಲ್ಲಿ ಭಾರಿ ಗಾಳಿ ಬೀಸಿದ್ದು ಅಡಕೆ ಮರ, ಬಾಳೆಗಿಡಗಳು, ಅಲ್ಲದೆ ಅರಣ್ಯ ಪ್ರದೇಶದ ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ಮುರಿದುಬಿದ್ದಿವೆ. ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕರಿಗೆ ಭಾನುವಾರ ಸುರಿದ ಮಳೆಯು ಕೊಂಚ ಸಮಾಧಾನ ನೀಡಿದೆ.