ಬೆಳ್ತಂಗಡಿ: ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇರುವುದರಿಂದ ಶಾಲಾ- ಕಾಲೇಜುಗಳ ಆರಂಭದ ದಿನಾಂಕವನ್ನು ಪುನರ್ಪರಿಶೀಲನೆ ಮಾಡಿದರೆ ಉತ್ತಮ. ಈ ಕುರಿತು ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯಾದ್ಯಂತ ಇರುವ ನೀರಿನ ಕೊರತೆಯ ಗಂಭೀರತೆಯನ್ನು ವಿವರಿಸಿದರು. ಹವಾಮಾನ ವರದಿ ಪ್ರಕಾರ ದ.ಕ.ಕ್ಕೆ ಮಳೆಗಾಲ ಜೂನ್ ಮೊದಲವಾರದ ನಂತರ ಆರಂಭವಾಗಲಿದೆ. ಮುಂಗಾರು ಪೂರ್ವ ಮಳೆ ಬರದ ಹಿನ್ನಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಇದರ ಪರಿಣಾಮ ಶಾಲೆ- ಕಾಲೇಜು, ಹಾಸ್ಟೇಲ್ಗಳಲ್ಲಿ ನೀರಿನ ಬರ ಉಂಟಾಗಿದೆ. ಈಗಾಗಲೇ ಮೇ 29 ಕ್ಕೆ ಶಾಲಾ- ಕಾಲೇಜು ಆರಂಭ ಎಂದು ಸುತ್ತೋಲೆ ಹೊರಡಿಸಕಾಗಿದೆ. ವಿದ್ಯಾರ್ಥಿಗಳನ್ನು ಕರೆಸಿ ಬಳಿಕ ನೀರಿಲ್ಲ ಎಂದು ಮನೆಗೆ ಕಳುಹಿಸುವುದು ಸೂಕ್ತವಲ್ಲ. ಇದು ಪರವೂರಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ವಿದ್ಯಾಲಯಗಳ ಆರಂಭದ ದಿನಾಂಕವನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಪೇಟೆ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ನೀರಿನ ಹಾಹಾಕಾರ ಎದ್ದಿದೆ. ಜನರ ಸಂಕಷ್ಟದ ಈ ದಿನಗಳಲ್ಲಿ ಜಿಲ್ಲಾಡಳಿತ ಜನಪ್ರತಿನಿಧಿಗಳ ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೆ ಟ್ಯಾಂಕರ್ ಮೂಲಕ, ಕೆಲ ಸ್ವಯಂಸೇವಾ ಸಂಸ್ಥೆಗಳು, ವೈಯಕ್ತಿಕವಾಗಿ ನೀರು ಸರಬರಾಜು ಆಗುತ್ತಿದೆ. ಆದರೂ ಸಂಘಟಿತ ರೂಪ ಕೊಡುವ ಉದ್ದೇಶದಿಂದ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾಡಳಿತ ಹಾಗೂ ಸರಕಾರವನ್ನು ಒತ್ತಾಯಿಸಿದರು.
ಜನರ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಜನರ ನಿರ್ಧಾರವೇ ಅಂತಿಮ. ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ಪರವಾಗಿ ಅಭಿನಂದನೆ ಸಲ್ಲಿಸಿದ ನಾಯಕ್ ಅವರು, ಬಿಜೆಪಿಯು ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರಖರ ಪ್ರತಿಪಕ್ಷವಾಗಿ, ಅತ್ಯಂತ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ, ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮೇ 22 ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವಾನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ನಡೆಯಲಿರುವ ಬಗ್ಗೆ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಧರ್ಮಸ್ಥಳ ಇದ್ದರು.