ಬೆಳ್ತಂಗಡಿ: ಕಳೆದ ಸುಮಾರು ಒಂದು ತಿಂಗಳಿನಿಂದ ಹರಿವು ಕ್ಷೀಣಗೊಂಡು ಆತಂಕ ಮೂಡಿಸಿದ್ದ ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಆರಂಭವಾಗಿದ್ದು ಪರಿಸರದ ಜನರು ನಿರಾಳರಾಗಿದ್ದಾರೆ.
ಕಲ್ಮಂಜ ಗ್ರಾಮದ ಪಜಿರಡ್ಕದಲ್ಲಿ ನೇತ್ರಾವತಿ ನದಿಯಲ್ಲಿ ಸಂಗಮಗೊಳ್ಳುವ ಮೃತ್ಯುಂಜಯ ನದಿ ಈ ಬಾರಿ ಭಾರಿ ಪ್ರಮಾಣದಲ್ಲಿಬತ್ತಿ ಹೋಗಿ,ಹೆಚ್ಚಿನ ಕಡೆಗಳಲ್ಲಿ ತನ್ನ ಹರಿವನ್ನು ನಿಲ್ಲಿಸಿತ್ತು.
ಹಿರಿಯರ ಪ್ರಕಾರ ಕಳೆದ ಅನೇಕ ವರ್ಷಗಳ ಬಳಿಕ ನದಿ ಇಷ್ಟೊಂದು ಬತ್ತಿರುವುದು ಈ ಬಾರಿ ಮಾತ್ರ.ನದಿಯು ಬತ್ತಿದ ಕಾರಣ ಕೃಷಿಕರು ಕಂಗಾಲಾಗುವ ಸ್ಥಿತಿ ಎದುರಾಗಿತ್ತು. ಕಳೆದ ನಾಲ್ಕಾರು ದಿನಗಳಿಂದ ಚಾರ್ಮಾಡಿ ಹಾಗೂ ನದಿ ಹರಿಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸುರಿದ ಮಳೆಯ ಪರಿಣಾಮ ನೀರಿನ ಹರಿವು ಆರಂಭವಾಗಿದೆ. ಚಾರ್ಮಾಡಿಯಿಂದ ಪಜಿರಡ್ಕ ತನಕ ನೀರು ಹರಿಯುತ್ತಿದೆ.ಈ ನದಿಗೆ ಆನಂಗಳ್ಳಿ,ಕಡಂಬಳ್ಳಿ,ಮುಂಡಾಜೆ,ಕಾಪು ಮೊದಲಾದ ಪರಿಸರಗಳಲ್ಲಿರುವ ಕಿಂಡಿ ಅಣೆಕಟ್ಟುಗಳು ತುಂಬಿವೆ. ಸುಮಾರು ಒಂದು ತಿಂಗಳಿನಿಂದ ಕೃಷಿ ತೋಟಗಳಿಗೆ ಕಿಂಡಿ ಅಣೆಕಟ್ಟಿನ ನೀರಿನ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಇವು ತುಂಬಿದ ಪರಿಣಾಮ ನೀರು ಮತ್ತೆ ಕೃಷಿ ತೋಟಗಳನ್ನು ತಲುಪಿದೆ.
ನೇತ್ರಾವತಿಗೆ ಬಲ: ನೇತ್ರಾವತಿ ನದಿಗೆ ಹೆಚ್ಚಿನ ಬಲವನ್ನು ನೀಡುವ ಮೃತ್ಯುಂಜಯ ನದಿಯಲ್ಲಿ ನೀರಿನ ಹೆಚ್ಚಳವಾಗಿರುವುದರಿಂದ ಪಜಿರಡ್ಕದಿಂದ ತಗ್ಗು ಪ್ರದೇಶಗಳಲ್ಲಿ ನೇತ್ರಾವತಿ ನದಿಯ ಹರಿವಿನಲ್ಲೂ ಹೆಚ್ಚಳವಾಗಿದೆ. ಇದು ಜಿಲ್ಲೆಯ ನಾನಾ ಭಾಗಗಳ ಮೂಲಕ ಹರಿಯುವ ನೇತ್ರಾವತಿ ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗಿದ್ದು ಜಿಲ್ಲೆಯ ಹಲವು ಕಡೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ದಿಡುಪೆ-ಕಲ್ಮಂಜ: ನೇತ್ರಾವತಿ ಯಥಾಸ್ಥಿತಿ: ನೇತ್ರಾವತಿ ನದಿಯ ಆರಂಭದ ಭಾಗವಾದ ದಿಡುಪೆಯಿಂದ ಕಲ್ಮಂಜದ ಕುಡೆಂಚಿತನಕ ಸುಮಾರು 15 ಕಿಮೀ. ವ್ಯಾಪ್ತಿಯಲ್ಲಿ ಬತ್ತಿ ಹೋಗಿರುವ ನದಿಯ ಸ್ಥಿತಿ ಹಾಗೆ ಮುಂದುವರೆದಿದೆ. ಒಂದೂವರೆ ತಿಂಗಳಿನಿಂದ ನದಿಯು ಆಟದ ಮೈದಾನದಂತೆ ಕಂಡುಬರುತ್ತಿದ್ದು ಕೆಲವೇ ಕೆಲವು ಸ್ಥಳಗಳಲ್ಲಿ ನದಿಯ ಹೊಂಡಗಳಲ್ಲಿ ಕೊಂಚಮಟ್ಟದಲ್ಲಿ ನೀರು ಇದ್ದು ಸದ್ಯ ಅದು ಕೂಡ ಬತ್ತಿದೆ. ಇಲ್ಲಿ ನದಿ ಹರಿಯುವ ಪ್ರದೇಶಗಳ ಅನೇಕ ಕಡೆ ಈಗಾಗಲೇ ದಿನಬಳಕೆಯ ನೀರಿಗೆ ನದಿಯಲ್ಲಿ ಹೊಂಡಗಳನ್ನು ತೋಡಲಾಗಿದೆ. ಎಳನೀರು,ದಿಡುಪೆ ಕಡೆ ನಿರಂತರ ಮಳೆಯಾದರೆ ಮಾತ್ರ ಈ ನದಿಯಲ್ಲಿ ಹರಿವು ಆರಂಭವಾಗಲು ಸಾಧ್ಯ.
ಕಳೆದ ಒಂದೂವರೆ ತಿಂಗಳಿನಿಂದ ಕೃಷಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೃಷಿಕರಲ್ಲಿ ಸದ್ಯ ಸುರಿದ ನಾಲ್ಕಾರು ಮಳೆ ಸಂತಸದ ವಾತಾವರಣವನ್ನು ಸೃಷ್ಟಿಸಿದೆ.ಇದು ತೋಟಗಳಿಗೆ ಜೀವಕಳೆ ನೀಡಿದೆ. ಪ್ರಸ್ತುತ ಬಿದ್ದ ಮಳೆಯು ಕೃಷಿ ತೋಟಗಳಿಗೆ ತಂಪೆರೆದಿದೆ.ಹಾಗೂ ಹಲವೆಡೆ ಕಿಂಡಿ ಅಣೆಕಟ್ಟುಗಳ ನೀರು ತೋಟಗಳನ್ನು ತಲುಪಲು ಸಾಧ್ಯವಾಗಿದೆ. ಶನಿವಾರ ಬೆಳಿಗ್ಗೆ,ಮಧ್ಯಾಹ್ನ ಹಾಗೂ ಆಗಾಗ ಬೆಳ್ತಂಗಡಿ ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿದಿದೆ.ಮಳೆ ಸುರಿದರೂ ಸೆಕೆ ಮಾತ್ರ ಹೆಚ್ಚಿತ್ತು.
“ಕಳೆದ ಒಂದು ತಿಂಗಳಿಂದ ಮೃತ್ಯುಂಜಯ ನದಿಯ ಕಾಪು ಕಿಂಡಿ ಅಣೆಕಟ್ಟಿನ ನೀರು ಕೃಷಿ ತೋಟಗಳನ್ನು ತಲುಪುತ್ತಿರಲಿಲ್ಲ ಆದರೆ ಈಗ ನದಿಯಲ್ಲಿ ನೀರು ಬಂದಿರುವುದರಿಂದ ನೀರು ಮತ್ತೆ ತೋಟಗಳಿಗೆ ಬರಲು ಆರಂಭವಾಗಿದೆ. 15 ದಿನ ಮಳೆ ಸುರಿಯದಿದ್ದರೂ ತೋಟಗಳಿಗೆ ಸಮಸ್ಯೆಯಾಗದು”
ಶ್ರೀನಿವಾಸ ಕಾಕತ್ಕರ್, ಕೃಷಿಕರು, ಮುಂಡಾಜೆ.