ಮಂಗಳೂರು: ಕಾಂಗ್ರೆಸ್ ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿದಿದ್ದು, ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕ, ಸೋನಿಯಾ, ಸಿದ್ದರಾಮಯ್ಯ, ಡಿಕೆಶಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ರಾಜ್ಯದ ಎಲ್ಲಾ ಜನರಿಗೂ ಕೊಡ್ತೇವೆ ಅಂದಿದ್ದರು. ಎಲ್ಲರಿಗೂ 24 ಗಂಟೆಯೊಳಗೆ ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳಿದ್ದರು. ಆದರೆ 20 ದಿನ ಕಳೆದರೂ ಯೋಜನೆ ಘೋಷಿಸಿಲ್ಲ.
ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದರೂ ಯೋಜನೆ ಜಾರಿಯಾಗಿಲ್ಲ. ಹಣಕಾಸು ಇಲಾಖೆ ಈ ಯೋಜನೆ ಜಾರಿ ಸಾಧ್ಯವಿಲ್ಲ ಎಂದಿದೆ. ಇನ್ನೊಂದೆಡೆ ಜನ ಕರೆಂಟ್ ಬಿಲ್ಲ ಕಟ್ಟುತ್ತಿಲ್ಲ. ಬಸ್ಗಳಲ್ಲಿ ಟಿಕೆಟ್ಗೆ ಹಣ ನೀಡುತ್ತಿಲ್ಲ. ಹಣಕಾಸು ಸಚಿವ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಸತ್ಯಾಂಶ ಗೊತ್ತಿದ್ದರೂ ಸುಳ್ಳು ಹೇಳಿದ್ದಾರೆ. ಈಗ ಹಾದಿ ತಪ್ಪಿಸಲು ಮೋದಿ 15 ಲಕ್ಷ ಕೊಡ್ತೀನಿ ಅಂತ ಹೇಳಿದ್ದರು ಅಂತ ಹೇಳುತ್ತಿದ್ದಾರೆ.
ಆದರೆ ಮೋದಿ ಎಲ್ಲಿಯೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿರಲಿಲ್ಲ. ಅವರು ಕಪ್ಪು ಹಣ ತಂದರೆ ಕೊಡುತ್ತೇವೆ ಎಂದು ಹೇಳಿದ್ದಾರೆ. ನಾವು ಜನರ ಪರ ಇದ್ದೇವೆ, ಗ್ಯಾರಂಟಿ ಜಾರಿಯಾಗದೇ ಇದ್ರೆ ಬಿಜೆಪಿ ಹೋರಾಟ ನಡೆಸಲಿದೆ. ಕಾಂಗ್ರೆಸ್ ನವರಿಂದ ಬೀದಿಯಲ್ಲಿ ನೌಕರರು ಏಟು ತಿನ್ನುವ ಹಾಗೆ ಆಗಿದೆ ಎಂದರು.