ಪುತ್ತೂರು: ಮಣಿಪುರ ಹಿಂಸಾಚಾರ ಖಂಡಿಸಿ ಸಿಐಟಿಯು ಪುತ್ತೂರು ಘಟಕದಿಂದ ಪ್ರತಿಭಟನೆ ನಡೆಯಿತು.
ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಉದ್ಧೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಿ.ಎಂ.ಭಟ್ , ಕಳೆದ ಒಂದು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದೆ. ಹಿಂಸೆ ತಡೆಯುವಲ್ಲಿ ಅಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ವಿಫಲವಾಗಿದೆ ಎಂದರು. ಜನರಲ್ಲಿ ಕೋಮುಭಾವನೆ ಕೆರಳಿಸುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇಂಥ ಪ್ರಯೋಗಗಳು ನಡೆದಿದೆ.
ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವವರೇ ಇಂದು ಪರಸ್ಪರ ಕಚ್ಚಾಡುವ ಸ್ಥಿತಿ ಪುತ್ತೂರಿನಲ್ಲಿದೆ. ನನ್ನ ಹಿಂದುತ್ವ ಸರಿ,ನಿನ್ನ ಹಿಂದುತ್ವ ಸರಿಯಿಲ್ಲ ಎನ್ನುವ ಚರ್ಚೆಯಾಗುತ್ತಿದೆ ಎಂದರು. ಕೋಮುವಾದಿ,ಮತಾಂಧ ಮತ್ತು ಭಯೋತ್ಪಾದಕರೆಲ್ಲರ ರಕ್ತ ಒಂದೇ ಆಗಿದೆ ಎಂದರು.