ಮಂಗಳೂರು: ನಗರದ ಕಲ್ಲಾಪು ನಲ್ಲಿರುವ ಗ್ಲೋಬಲ್ ತರಕಾರಿ ಮತ್ತು ಹಣ್ಣು ಹಂಪಲುಗಳ ಮಾರ್ಕೆಟ್ ಗೆ ಮಂಗಳವಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ಭೇಟಿ ನೀಡಿ ಅಲ್ಲಿನ ವರ್ತಕರನ್ನು ಮತ್ತು ಕೂಲಿ ಕಾರ್ಮಿಕರನ್ನು ಕಂಡು ಮತ ಯಾಚಿಸಿದರು. ಮಂಗಳೂರಿನ ಬೆಂಗ್ರೆ, ಬಂದರ್, ಕುದ್ರೋಳಿ, ಬಜಾಲ್, ಜೆಪ್ಪಿನ ಮೊಗರು ಪ್ರದೇಶದ ಅನೇಕ ಜನರು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅದಲ್ಲದೆ ಇಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಮಂಗಳೂರಿನವರೇ ಆಗಿರುತ್ತಾರೆ. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಲೋಬೊ ನಗರದಲ್ಲಿರುವ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ, ಅದಲ್ಲದೆ ಅಲ್ಲಿನ ವರ್ತಕರಿಗೆ ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸದೇ ಬಿಜೆಪಿ ನೇತೃತ್ವದ ಆಡಳಿತವು ಧ್ವಂಸ ಮಾಡಿದೆ. ಇದರಿಂದ ವರ್ತಕರು, ಕೂಲಿ ಕಾರ್ಮಿಕರು ಬಹಳಷ್ಟು ನೊಂದಿರುತ್ತಾರೆ.
ಇದು ಬಿಜೆಪಿ ಆಡಳಿತ ಮಾಡಿದ ಘೋರ ಅನ್ಯಾಯ. ಇಂತಹ ಕೆಲಸವನ್ನು ಕಾಂಗ್ರೆಸ್ ಯಾವತ್ತೂ ಮಾಡುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಬಡ ಜನರ ಪರವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನ್ನು ಪಕ್ಷದ ಕಾರ್ಯಕರ್ತರು ಈಗಾಗಲೇ ಮನೆ ಮನೆಗೆ ತಲುಪಿಸಿದ್ದಾರೆ. ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನರ ಆಶೀರ್ವಾದ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಹಮೀದ್ ಕಣ್ಣೂರು, ರಫೀಕ್ ಕಣ್ಣೂರು, ಆರಿಫ್ ಬಾವಾ, ಹುಸೈನ್ ಕಣ್ಣೂರು, ಅಬ್ದುಲ್ ಖಾದರ್,ಐ ಮೋನು, ಮುನ್ನಾ ಕುಂಡಾಲ, ಅಶ್ರಫ್ ಕಣ್ಣೂರು, ವರ್ತಕರಾದ ಹಮೀದ್ ಡಿ. ಎ., ಅಬೂಬಕರ್ ಸಿ. ಆರ್. ಮೊದಲಾದವರು ಉಪಸ್ಥಿತರಿದ್ದರು.