ಮೂಡುಬಿದಿರೆ: ಹಿಮಾಚಲ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೀಡಿದ ಗ್ಯಾರಂಟಿಯನ್ನು ಈಡೇರಿಸಿಲ್ಲ. ಕರ್ನಾಟಕದಲ್ಲಿ ತನ್ನ ಬಗ್ಗೆಯೇ ಗ್ಯಾರಂಟಿ ಇಲ್ಲದ ಕಾಂಗ್ರೆಸ್ ಕರ್ನಾಟಕದ ಜನತೆಗೆ ಗ್ಯಾರಂಟಿಯ ಭರವಸೆ ನೀಡಿರುವುದು ದುರದೃಷ್ಟಕರ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರ ಶಿರ್ತಾಡಿ ಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಪ್ರತಿಪಕ್ಷಗಳು ದೇಶವನ್ನು ಹೇಗೆ ಹಾಳು ಮಾಡಬಹುದೆಂಬ ಚಿಂತನೆಯಲ್ಲಿ ಮುಳುಗಿದೆ. ಫಿಎಫ್ಐ ಅನ್ನು ಕಾಂಗ್ರೆಸ್ ತನ್ನ ಮಕ್ಕಳಂತೆ ಸಾಕುತ್ತಿದೆ. ಅದನ್ನು ಬೆಳೆಸುವುದರಲ್ಲಿಯೇ ದಿನ ಕಳೆಯುತ್ತಿದೆ.ಆದರೆ ದೇಶದ ಅಭಿವೃದ್ಧಿಗೆ ತೊಡಕಾಗಿರುವ ವಿದ್ವಾಂಸಕ ಕೃತ್ಯದಲ್ಲಿ ತೊಡಗಿರುವ ಫಿಎಫ್.ಐ ನ್ನು ಮೋದಿಯವರು ನಿಷೇಧಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಈ ನಿಷೇಧ ಸ್ವಾಗರ್ತ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದು ಅತೀ ಅಗತ್ಯ. ಇದರಿಂದ ಎಲ್ಲರೂ ಸಮಾನವಾಗಿರಲು ಸಾಧ್ಯ. ಇದನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ ಎಂದ ಅವರು ಕರ್ನಾಟಕದ ಉತ್ತಮ ಬೆಳವಣಿಗೆಗಾಗಿ ಬಿಜೆಪಿಗೆ ಮತ ನೀಡಿ ಕನಿಷ್ಠ 130ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಬಾರಿಯ ಚುನಾವಣೆಯು ಹನುಮ ಭಕ್ತರು ಮತ್ತು ಟಿಪ್ಪು ಭಕ್ತರ ನಡುವೆ ನಡೆಯುವ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಲ್ಲಿ ಉಮಾನಾಥ ಕೋಟ್ಯಾನ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ, ಸುಳ್ಳು ಅಪಪ್ರಚಾರಗಳ ಮೂಲಕ ನನ್ನ ಮನೋಸ್ಥೈರ್ಯ ಕುಗ್ಗಿಸುವ ಕೆಲಸವನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ. ಹಣ, ಹೆಂಡ ಹಂಚುವುದು, ಗೂಂಡ ವರ್ತನೆ ಮತ್ತು ಮತದಾರರಿಗೆ ಬೆದರಿಕೆ ಹಾಕುವ ಕೆಲಸಗಳು ನಡೆಯುತ್ತಿವೆ. ಈ ಬಗ್ಗೆ ಕಾರ್ಯಕರ್ತರು ಎಚ್ಚರವಾಗಿರಬೇಕು. ಮತದಾರರು ಆಮಿಷಗಳಿಗೆ ಬಲಿಯಾಗದೇ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕೆಂದರು.
ವಾಗ್ಮಿ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್.ಎಂ, ಚುನಾವಣಾ ಸಂಚಾಲಕ ಈಶ್ವರ ಕಟೀಲು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಬಿಜೆಪಿ ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಕ್ಷೇತ್ರ ಪ್ರಭಾರಿ ರೇಷ್ಮಾ ಉದಯ್ ಕುಮಾರ್ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುನಿಲ್ ಆಳ್ವ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.