ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಔಪಚಾರಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಆಯಾಯ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸುವ ಜತೆಗೆ ಕೌಶಲವಂತ ಹಾಗೂ ಸಂಸ್ಕಾರಯುತ ನಾಗರಿಕರನ್ನಾಗಿ ರೂಪಿಸುವುದಕ್ಕೂ ಆದ್ಯತೆ ನೀಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಎಸ್.ಡಿ.ಎಂ. ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಮೈಸೂರಿನ ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (ಎಸ್.ಡಿ.ಎಂ.ಐಎಂಡಿ) ಸಂಸ್ಥೆಯಲ್ಲಿ ಮೇ 17, 18ರಂದು ನಡೆದ ಅಖಿಲ ಕರ್ನಾಟಕ ಎಸ್.ಡಿ.ಎಂ. ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಪದವೀಧರರನ್ನು ಸೃಷ್ಟಿಸುವುದಲ್ಲ, ವಿದ್ಯಾರ್ಥಿಗಳು ವಿದ್ಯಾವಂತರಾಗುವ ಜತಜತೆಗೆ ಕೌಶಲ, ಸಂಸ್ಕಾರ ಹೊಂದಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಿ, ಉತ್ತಮ ವ್ಯಕ್ತಿತ್ವಗಳಾಗಿ, ಸಮಾಜಕ್ಕೆ ಆಸ್ತಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಮತ್ತಷ್ಟು ವಿಸ್ತೃತ ಪ್ರಯತ್ನಗಳಾಗಲಿ’ ಎಂದು ಅವರು ಅಪೇಕ್ಷೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ತಾವು ಗಳಿಸಿದ ವೃತ್ತಿಪರ ಪರಿಣತಿ, ಮೌಲ್ಯಯುತ ಶಿಕ್ಷಣದ ಬಗೆಗೆ ಹೆಮ್ಮೆ ಪಡುವಂತಾಗಬೇಕು. ಅವರು ಸೂಕ್ತ ಉದ್ಯೋಗ ಪಡೆದು ಯಶಸ್ವಿಗಳಾಗುವ ನಿಟ್ಟಿನಲ್ಲಿ ಸಂಸ್ಥೆಗಳು ಪ್ರಯತ್ನ ಮುಂದುವರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಬದಲಾಗುತ್ತಿರುವ ಕಾಲಘಟ್ಟ ಹಾಗೂ ವಿದ್ಯಮಾನಗಳಿಗನುಗುಣವಾಗಿ ಶಿಕ್ಷಕರು ಅಪ್ಡೇಟ್ ಆಗಬೇಕು. ತನ್ಮೂಲಕ ವಿದ್ಯಾರ್ಥಿಗಳಲ್ಲೂ ಈ ಪ್ರವೃತ್ತಿ ಬೆಳೆಯಬೇಕು. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ನಮ್ಮ ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸುವಂತಾಗಬೇಕು” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಸ್ವಾಯತ್ತ ಸಂಸ್ಥೆಗಳು ಆಧುನಿಕ ಜಗತ್ತಿಗೆ ಪೂರಕವಾದ ಪಠ್ಯಕ್ರಮ ರೂಪಿಸಿಕೊಂಡು, ಪರಸ್ಪರ ಸಹಕಾರ, ಅಂತರ್ಶಿಸ್ತೀಯ ಚಟುವಟಿಕೆ ಜತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕು. ಆ ನೆಲೆಯಲ್ಲಿ ಸ್ವಾಯತ್ತತೆ ಅತ್ಯುತ್ತಮ ರೀತಿಯಲ್ಲಿ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ ಅವರು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸುದ್ದಿ ಸಮಾಚಾರಗಳಿಗಾಗಿ ರೂಪಿಸಲಾಗಿರುವ ‘ಎಸ್.ಡಿ.ಎಂ. ನ್ಯೂಸ್’ ಆ್ಯಪ್ ಹಾಗೂ ವೆಬ್ಸೈಟ್ ಬಿಡುಗಡೆಗೊಳಿಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ನಿರಂಜನ್ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್. ಹಾಗೂ ಜೀವಂಧರ್(ಧಾರವಾಡ), ಎಸ್.ಡಿ.ಎಂ. ಐಎಂಡಿ ನಿರ್ದೇಶಕರಾದ ಕರ್ನಲ್ ಪ್ರಸಾದ್ಹಾಗೂ ಡಾ. ಎನ್.ಆರ್. ಪರಶುರಾಮ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.