ಸುಳ್ಯ: ಸುಳ್ಯದಲ್ಲಿ ಡೆಂಗ್ಯು ಕಾಯಿಲೆಯ ಸಮಸ್ಯೆ ಹೆಚ್ಚಾಗಿತ್ತು. ಆದರೆ ಇದೀಗ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಸಹಕಾರದಿಂದ ಜಾಗೃತಿ ಮೂಡಿಸಿದ ಪರಿಣಾಮ ಸುಳ್ಯ ಡೆಂಗ್ಯು ಜ್ವರ ನಿಯಂತ್ರಣಕ್ಕೆ ಬಂದಿದೆ. ಈ ಕುರಿತು ನಿರಂತರ ಜಾಗೃತಿ ಅಗತ್ಯ ಎಂದು ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಹೇಳಿದರು.
ವಿಶ್ವ ಡೆಂಗ್ಯು ಜ್ವರ ನಿಯಂತ್ರಣ ದಿನಾಚರಣೆ ಅಂಗವಾಗಿ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಸುಳ್ಯ ಪಂಚಾಯತ್ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರಂಭಿಕ ಮಳೆಯ ಸಂದರ್ಭದಲ್ಲಿ ಮನೆ, ಅಂಗಡಿಗಳ ಸುತ್ತ ಮುತ್ತ ಇರುವ ಪಾತ್ರೆ, ಇನ್ನಿತರ ಕಡೆಗಳಲ್ಲಿ ನೀರು ನಿಂತು ಅಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ. ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದವರು ಹೇಳಿದರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ನಮ್ಮ ಮನೆಯ ಪರಿಸರ ಸ್ವಚ್ಚವಾಗಿಡುವಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು. ಡೆಂಗ್ಯು ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ, ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ನಗರ ಪಂಚಾಯತ್ ಸಿಬ್ಬಂದಿಗಳು ಇದ್ದರು.
ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಹೊರಟ ಜಾಗೃತಿ ಜಾಥಾ ನಗರದಲ್ಲಿ ಸಂಚರಿಸಿತು. ನಗರದ ಅಂಗಡಿ, ಮನೆಗಳಿಗೆ ತೆರಳಿ ಮಾಹಿತಿ ನೀಡುವ ಕಾರ್ಯವನ್ನೂ ಹಮ್ಮಿಕೊಳ್ಳಲಾಯಿತು.