ಮೂಡುಬಿದಿರೆ: ಕಳೆದ ಐದು ವರ್ಷಗಳ ಅವದಿಯಲ್ಲಿ ಯಾವುದೇ ಜಾತಿ ಧರ್ಮ ಮತ್ತು ಪಕ್ಷಗಳ ಮುಖ ನೋಡದೆ, ಎಲ್ಲಾ ವರ್ಗಗಳ ಜನರ ಸೇವೆ ಮಾಡಿದ್ದೇನೆ. ಎರಡು ಸಾವಿರದ ನೂರ ಎಂಬತ್ತು ಕೋಟಿ ರೂಪಾಯಿ ಅಭಿವೃದ್ದಿಯಿಂದ ಕಂಗೆಟ್ಟ ಕಾಂಗ್ರೆಸ್ ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತಿ ರಾಜಕಾರಣದ ವಿಷ ಬೀಜ ಮಿಥುನ್ ರೈ ತಲೆಯಲ್ಲಿದೆ. ಕ್ಷೇತ್ರದಲ್ಲಿ ಜಾತೀಯತೆಯನ್ನು ಪರಿಚಯಿಸಿದ್ದೇ ಅವರು. ಬಂಟ ಮತಗಳ ಓಲೈಕೆಗಾಗಿ ನಾಟಕವಾಡುತ್ತಿದ್ದು, ಬಂಟ ಸಮುದಾಯಕ್ಕೂ ಈ ನಾಟಕ ಅರ್ಥವಾಗಿದ್ದು ಹೆಚ್ಚಿನ ಎಲ್ಲಾ ಬಂಟ ಸಮುದಾಯದ ಬಂಧುಗಳು ನನ್ನ ಅಭಿವೃದ್ದಿಗಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಅಭಿವೃದ್ದಿ ವಿಚಾರದಲ್ಲಿ ತುಟಿ ಬಿಚ್ಚಲಾಗದ ಕಾಂಗ್ರೆಸ್ನವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಬಗ್ಗೆ ದೇವರ ಪಾದಕ್ಕೆ ಎಲ್ಲವನ್ನೂ ಬಿಟ್ಟು ಬಿಟ್ಟಿದ್ದೇನೆ. ದಾಖಲೆಗಳು ಅವರ ಬಳಿ ಇದ್ದರೆ ಮಾಧ್ಯಮಗಳೆದುರು ಯಾಕೆ ತರುತ್ತಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿಗರು ಧರ್ಮದ ಪ್ರಮುಖರಿಗೆ ಕರೆ ಮಾಡಿ ಇಲ್ಲಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ. ಕ್ಷೇತ್ರಾದ್ಯಂತ ಈಗಾಗಲೇ ಮೂರು ಸುತ್ತಿನ ಮತಯಾಚನೆಯನ್ನು ನಮ್ಮ ಸುಮಾರು ಹತ್ತು ಸಾವಿರ ಮಂದಿ ಕಾರ್ಯಕರ್ತರು ಮಾಡಿ ಮುಗಿಸಿದ್ದಾರೆ. ಎಲ್ಲಾ ಕಡೆ ಮತಯಾಚನೆ ಸಂದರ್ಭ ಜನ ನಮ್ಮನ್ನು ಮನೆ ಬಾಗಿಲಿಗೆ ಕರೆದು ಉಪಚರಿಸುತ್ತಿದ್ದಾರೆ. ಇರುವೈಲ್ ದೇವಸ್ಥಾನ ಮತ್ತು ಅಲೇರಿಯಲ್ಲಿರುವ ಸತ್ಯ ಸಾರಮಣಿ ಕ್ಷೇತ್ರದ ವಿಚಾರದಲ್ಲಿ ಸುಳ್ಳು ಹೇಳಿದ ಕಾಂಗ್ರೆಸ್ಸಿಗರು ಜನರನ್ನು ದಿಕ್ಕು ತಪ್ಪಿಸಲು ಮುಂದಾದರೂ ಕೂಡ ಸತ್ಯ ಪ್ರಮಾಣಕ್ಕೆ ಬಾರದೆ ತಪ್ಪಿಸಿಕೊಂಡಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ಬಿಜೆಪಿ ಯಾವತ್ತೂ ಯಾವುದೇ ಜಾತಿ ಧರ್ಮಗಳ ವಿರುದ್ದ ನಡೆದುಕೊಳ್ಳುವ ಪಕ್ಷವಲ್ಲ. ಎಲ್ಲಾ ವರ್ಗಗಳ ಜನರ ಅಭಿವೃದ್ದಿಗೆ ಮೂಡುಬಿದಿರೆ ಕ್ಷೇತ್ರದ ಮೂರು ತಾಲೂಕುಗಳು ಸಾಕ್ಷಿಯಾಗಿದೆ. ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು ಎನ್ನುವ ಕಾರಣಕ್ಕೆ ಬಿರುಸಿನ ಪ್ರಚಾರ ನಡೆದಿದೆ. ಎಲ್ಲಾ ಶಕ್ತಿ ಕೇಂದ್ರಗಳ ಸಭೆಯನ್ನು ನಡೆಸಲಾಗಿದೆ. ಶಾಸಕರು ಪುನರಾಯ್ಕೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.
ಚುನಾವಣಾ ಉಸ್ತುವಾರಿ ಈಶ್ವರ ಕಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ, ಕೇಶವ ಕರ್ಕೆರಾ ಉಪಸ್ಥಿತರರಿದ್ದರು.