ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ತಾಕತ್ತು ಇದ್ದರೆ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ ಎಂದು ಹಿಂದೂ ಮಹಾಸಭಾ ಸಂಚಾಲಕ ಧರ್ಮೇಂದ್ರ ಅಮೀನ್ ಸವಾಲು ಹಾಕಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಡಿವೈಎಸ್ಪಿ ಅವರನ್ನ ಅಮಾನತು ಮಾಡ್ಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ ಅವರು ನ್ಯಾಯ ದೊರೆಯದಿದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಎಚ್ಚರಿಸಿದರು.
2024 ಲೋಕಸಭಾ ಚುನಾವಣೆಯಿದೆ. ನಾವು ಮೋದಿ ನೋಡಿಕೊಂಡು ಸುಮ್ಮನಿದ್ದೇವೆ. ಅದು ಬಿಟ್ಟು ನಿಮ್ಮ ಮುಖ ನೋಡಿ ಸುಮ್ಮನಿರಲ್ಲ. ಇದಕ್ಕೆ ಉತ್ತರ ಕೊಡುವುದು ಗೊತ್ತಿದೆ. ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ ಹಿಂದುತ್ವವಾದಿಗಳಿಗೆ ಸಹಾಯ ಮಾಡಿ, ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನಿರುವುದಿಲ್ಲ ಎಂದರು. ಅಲ್ಲದೆ ಎಲ್ಲ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಸಿದರು.
ಮೋದಿ, ಯೋಗಿ ಹೆಸರು ಹೇಳದೆ ಅರುಣ್ ಪುತ್ತಿಲ ಪಡೆದ 10 ಶೇ ಮತವನ್ನು ಪಡೆದು ತೋರಿಸಿ ಎಂದು ಸವಾಲು ಹಾಕಿದರು. ಹರೀಶ್ ಪೂಂಜಾ ಸತ್ಯಜಿತ್, ತಿಮರೋಡಿ ಬಗ್ಗೆ ಮಾತನಾಡುತ್ತಾರೆ. ಅವರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಅಧಿಕಾರ ಸಿಕ್ಕಿದ ಕೂಡಲೇ ಬಾಯಿಗೆ ಬಂದ ಹಾಗೆ ಮಾತನಾಡುವುದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸುವುದು ಗೊತ್ತು ಎಂದು ಎಚ್ಚರಿಸಿದರು.