ಮಂಗಳೂರು: ಕಾಂಗ್ರೆಸ್ ಬಹುಮತದ ಜಯಭೇರಿ ಬಾರಿಸಿದ್ದು, ಇದೀಗ ಸಿಎಂ ಗಾದಿಯ ಚರ್ಚೆ ಜೋರಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಿಂದ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವವರು ಯಾರೆಂಬ ಚರ್ಚೆ ಜೋರಾಗಿದೆ.
ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ 5 ನೇ ಬಾರಿ ಶಾಸಕರಾಗಿರುವ ಯು.ಟಿ ಖಾದರ್ ಈ ಹಿಂದೆ ವಿವಿಧ ಸಚಿವ ಸ್ಥಾನ ನಿರ್ವಹಿಸಿದ್ದರು. ಅಲ್ಲದೆ ಕಳೆದ ಸರ್ಕಾರದಲ್ಲಿ ವಿಪಕ್ಷ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಸೋಲಿಲ್ಲದ ಸರದಾರ ಯು.ಟಿ. ಖಾದರ್ ಗೆ ಸಚಿವ ಸ್ಥಾನ ಖಚಿತ ಎಂಬ ಮಾತು ಕೇಳಿಬರುತ್ತಿದೆ. ಮಂತ್ರಿಮಂಡಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮೊದಲ ಆದ್ಯತೆ ಯು.ಟಿ ಖಾದರ್ ಎಂಬುದು ತಿಳಿದಿರುವ ವಿಚಾರವೇ.
ಭಂಡಾರಿ, ಹರೀಶ್ ಕುಮಾರ್ ರೇಸ್ನಲ್ಲಿ: ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರ ಹೆಸರು ಕೂಡ ಸಚಿವ ಸ್ಥಾನದ ರೇಸ್ನಲ್ಲಿದೆ. ಹರೀಶ್ ಕುಮಾರ್ ಅವಧಿ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಡಾ. ಮಂಜುನಾಥ ಭಂಡಾರಿ ಅವರಿಗೆ ಐದು ವರ್ಷಗಳ ಅವಧಿಯಿದೆ. ಹೈಕಮಾಂಡ್ ವಲಯದಲ್ಲಿಯೂ ಪ್ರಭಾವಿಯಾಗಿರುವ ಮಂಜುನಾಥ್ ಭಂಡಾರಿ ಅವರಿಗೆ ಸಚಿವ ಸ್ಥಾನ ಖಾತ್ರಿ ಎಂಬ ಕುರಿತು ಚರ್ಚೆ ನಡೆಯುತ್ತಿದೆ.