ಉಜಿರೆ : ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆ ಸಂವಹಿಸುವ ವಿವಿಧ ಬಗೆಯ ಅರ್ಥವಿನ್ಯಾಸಗಳೊಂದಿಗೆ ಅನುಸಂಧಾನ ನಡೆಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ವಿಮರ್ಶಕ ಪ್ರೊ. ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.
ಉಜಿರೆ ಎಸ್. ಡಿ. ಎಂ ಸ್ವಾಯಕ್ತ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿತ ೨೫ನೆ ಸಾಹಿತ್ಯ ಶಿಬಿರ ರಜತ ಸಂಭ್ರಮದ ಕಲಾನುಸಂದಾನ ಶಿಬಿರದ ಮೊದಲನೇ ಗೋಷ್ಟಿ ಕಾವ್ಯಾನುಸಂದಾನದಲ್ಲಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆಯ ಅರ್ಥ ಪದಶಃ ರೀತಿಯಲ್ಲಿರುವುದಿಲ್ಲ. ಅರ್ಥವಂತಿಕೆಯ ನಿರೂಪಣೆಯು ಭಾಷೆಯ ನೆರವಿನೊಂದಿಗೆ ನಡೆಯುತ್ತದೆ. ಇಂಥ ಭಾಷಿಕ ಸತ್ವದೊಂದಿಗೆ ಅನುಸಂಧಾನ ನಡೆಸುವುದು ಸುಲಭವಲ್ಲ ಎಂದರು.
ಕಾವ್ಯದಲ್ಲಿ ಶಬ್ದ ಶರೀರವೇ ಅದಕ್ಕೆ ಆಧಾರ. ಒಬ್ಬರಿಗೆ ಒಂದು ಕವಿತೆ ನೀಡುವ ಅನುಭವ ಮತ್ತೊಬ್ಬರಿಗೆ ಅದೇ ಸ್ವಾದ ನೀಡಬೇಕು ಎಂದೇನಿಲ್ಲ. ಸಾಹಿತ್ಯದಲ್ಲಿ ಒಂದು ಪದ, ವಾಕ್ಯಕ್ಕೆ ಅನೇಕ ಅರ್ಥಬಾಹುಳ್ಯ ಇರುತ್ತವೆ. ಕಾವ್ಯಸಹೃದಯತೆ ಎಂಬುದನ್ನು ಅರಿಯಬೇಕಾದರೆ ಕನ್ನಡ ಕವಿ ದಿಗ್ಗಜರ ಕವಿತೆ ಅಧ್ಯಯನ ಮುಖ್ಯ. ನರಸಿಂಹಸ್ವಾಮಿ, ಎ ಕೆ ರಾಮಾನುಜಂ, ವೈದೇಹಿಯವರ ನಾಲ್ಕು ಕಾವ್ಯಗಳನ್ನು ನೆರೆದ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸುವ ಮೂಲಕ ಕಾವ್ಯಾವಲೋಕನ ನಡೆಸಿದರು.
ಕವಿತೆ ಎನ್ನುವುದು ಕವಿ ಮತ್ತು ಓದುಗನ ನಡುವಿನ ಅನುಸಂಧಾನ. ಕಾವ್ಯಕ್ಕೆ ಜೀವ ಬರುವುದು ಅದು ಓದುಗನ ಕೈ ಸೇರಿದಾಗ. ಪದ್ಯ ಎಂಬುದು ವಕ್ರೋಕ್ತಿ. ಕವಿತೆಗೆ ಪದವೇ ಪದಾರ್ಥ ಎಂದು ವಿಶ್ಲೇಷಿಸಿದರು.