ಮಂಗಳೂರು: ಜೂನ್ 3ರಂದು ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 26 ಫೋನ್ ಕರೆಗಳನ್ನು ಸ್ವೀಕರಿಸಲಾಗಿದ್ದು 16 ಕರೆಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿರುವ ಕರೆಗಳಾಗಿದ್ದು ತುರ್ತಾಗಿ ಕ್ರಮಕೈಗೊಳ್ಳಬೇಕಾದ ವಿಚಾರಗಳ ಕುರಿತು ಈ ಕೆಳಗಿನಂತೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಸಲ್ಲಿಸಿರುವ ದೂರುಗಳ ಪೈಕಿ ಕೂಳೂರು ವಿ.ಅರ್.ಎಲ್ ಕಚೇರಿಯ ಎದುರುಗಡೆ ಇರುವ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿಟ್ಟು ರಿಪೇರಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದು ಈ ಕುರಿತು ರಸ್ತೆ ಬದಿಯಲ್ಲಿರುವ ವಾಹನಗಳನ್ನು ತೆರವುಗೊಳಿಸಿ ಗ್ಯಾರೇಜ್ ಮಾಲಿಕರಿಗೆ ರಸ್ತೆಯಲ್ಲಿ ವಾಹನಗಳನ್ನು ಇಡದಂತೆ ಎಚ್ಚರಿಕೆ ನೀಡಲಾಗಿದೆ.
ಸುರತ್ಕಲ್ ಎಂ.ಆರ್.ಪಿ.ಎಲ್ ರಸ್ತೆಯಲ್ಲಿರುವ ಕಾಂಪ್ಲಕ್ಸ್ ನ ಎದುರಿನ ರಸ್ತೆಯಲ್ಲಿ, ಬಿಜೈ ಚರ್ಚ್ ಎದುರುಗಡೆಯ ರಸ್ತೆಯಲ್ಲಿ, ಮಂಗಳದೇವಿ ಎದುರುಗಡೆ ಹಾಗೂ ಡಿ-ಮಾರ್ಟ್ ಎದುರುಗಡೆಯ ರಸ್ತೆಯಲ್ಲಿರುವ ವಾಹನ ನಿಲುಗಡೆ ಮಾಡಿರುವುದನ್ನು ತೆರವುಗೊಳಿಸಲಾಗಿದೆ. ಸೆಂಟ್ರಲ್ ಮಾರ್ಕೆಟ್ ನಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು ಹಾಗೂ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.
ಬೆಂದೂರುವೆಲ್ ಬಳಿ ಇರುವ ಸೈಂಟ್ ಅಗ್ನೇಸ್ ಹಾಗೂ ತೆರೇಸಾ ಸ್ಕೂಲ್ ಬಳಿ ಈಗಾಗಲೇ ಸಿಬ್ಬಂದಿಗಳನ್ನು ನಿಯೋಜಿಲಾಗಿದ್ದು ಅವರುಗಳು ವಾಹನಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಂಪನಕಟ್ಟೆಯ ಜಂಕ್ಷನ್ ನಲ್ಲಿ ಬಸ್ಸುಗಳಿಂದ ಇತರೆ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರಿದ್ದು ಈ ಬಗ್ಗೆ ಬಸ್ಸುಗಳ ವಿರುದ್ದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮಂಗಳೂರು ನಗರದ ಸಂಚಾರ ಸುರಕ್ಷತೆ ಹಾಗೂ ಸುಧಾರಣೆಗೆ ಹಲವಾರು ದೂರು, ಸಲಹೆ ಹಾಗೂ ಅಹವಾಲುಗಳನ್ನು ನೀಡಿದ್ದು, ಈ ಬಗ್ಗೆ ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು.