ಮಂಗಳೂರು: ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ಮೇ 27ರಂದು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ಹಾಗೂ ಮೇ 28ರಂದು ಯಕ್ಷಧ್ರುವ ಪಟ್ಲ ಸಂಭ್ರಮ 2023 ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ ನಡೆಯಲಿದೆ ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಗ್ಗೆ 8ರಿಂದ ಚೌಕಿ ಪೂಜೆ ಬಳಿಕ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪಟ್ಲ ಸಂಭ್ರಮ ಉದ್ಘಾಟನೆ ನಡೆಯಲಿದೆ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಮಾರಂಭದಲ್ಲಿ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟನೆ ನೆರವೇರಲಿದೆ. ಪ್ರೊಫೆಸರ್ ಎಂ.ಎಲ್. ಸಾಮಗ ಅವರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ 2023 ನೀಡಲಾಗುವುದು. ಟ್ರಸ್ಟ್ ನ ಮಹಾಪೋಷಕ ಎಂ ಆರ್ ಜಿ ಗ್ರೂಪ್ನ ಚೇರ್ಮೆನ್ ಪ್ರಕಾಶ್ ಕೆ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಹೇಳಿದರು. ಕಿಚ್ಚ ಸುದೀಪ್, ಕಾಂತಾರ ಸಿನೆಮಾ ಖ್ಯಾತಿಯ ರಿಷಬ್ ಶೆಟ್ಟಿ ಮತ್ತಿತರ ಕಲಾವಿದರು ಸಮಾರಂಭಕ್ಕೆ ತಾರಾ ಮೆರುಗು ನೀಡಲಿದ್ದಾರೆ. ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಉಪಾಧ್ಯಕ್ಷ ಡಾ|ಮನು ರಾವ್ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.