ಮಂಗಳೂರು: ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಪ್ರವೀಣ್ ನೆಟ್ಟಾರು ಮತ್ತು ಫಾಸಿಲ್ ಕೊಲೆ ಪ್ರಕರಣ ಈಗ ಮತ್ತೆ ಚರ್ಚೆಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣಕ್ಕೆ ಈ ಇಬ್ಬರು ಯುವಕರು ಬಲಿಯಾಗಿದ್ರು. ಆದರೆ ಪ್ರವೀಣ್ ಹತ್ಯೆಗೆ 9 ದಿನ ಮೊದಲು ನಡೆದ ಮಸೂದ್ ಎಂಬ ಯುವಕನ ಹತ್ಯೆ ನಡೆದಿತ್ತು. ಬಜರಂಗದಳದ 7 ಯುವಕರು ಮಸೂದ್ ಹತ್ಯೆ ಮಾಡಿದ್ದರು.
ಬಳಿಕ ಪ್ರವೀಣ್ ನೆಟ್ಟಾರು ಪಿಎಫ್ಐ ಹಂತಕರಿಗೆ ಬಲಿಯಾದರು. ಪ್ರತೀಕಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಫಾಸಿಲ್ ಹತ್ಯೆ ನಡೆಸಿದ್ದರು. ಕೆಲ ತಿಂಗಳ ಬಳಿಕ ನಡೆದ ಜಲೀಲ್ ಹಾಗೂ ದಿನೇಶ್ ಕನ್ಯಾಡಿ ಎಂಬವರ ಹತ್ಯೆ ಕೂಡಾ ನಡೆದಿತ್ತು. ಸದ್ಯ ಈ ಎಲ್ಲಾ ಹತ್ಯೆಗಳು ಈಗ ಮುನ್ನೆಲೆಗೆ ಬಂದಿದ್ದು ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ನಡೆದ ಐದು ಕೊಲೆಗಳಲ್ಲಿ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಮಾತ್ರ ಹಿಂದಿನ ಸರ್ಕಾರ ನ್ಯಾಯ ಒದಗಿಸಿದೆ.
ಆದರೆ ಉಳಿದ ಪ್ರಕರಣ ಗಳನ್ನು ಸರಿಯಾಗಿ ತನಿಕೆ ಕೂಡಾ ನಡೆಸದೆ ಪರಿಹಾರವನ್ನೂ ನೀಡದೆ ತಾರತಮ್ಯ ಮಾಡಿತ್ತು. ಸದ್ಯ ಹೊಸ ಸರ್ಕಾರ ಬಂದಿದ್ದು ಅನ್ಯಾಯಕ್ಕೆ ಒಳಗಾಗಿರೋ ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರನ್ನು ಮರು ನೇಮಕ ಮಾಡುವ ಭರವಸೆ ನೀಡಲಾಗಿದೆ. ಹೀಗಾಗಿ ಉಳಿದ ನಾಲ್ಕು ಪ್ರಕರಣವನ್ನೂ ಇದೇ ರೀತಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಆಗ್ರಹಿಸಿದೆ.
ಬೆಳ್ಳಾರೆಯ ಮಸೂದ್ ಹಾಗೂ ಧರ್ಮಸ್ಥಳದ ದಿನೇಶ್ ಕನ್ಯಾಡಿ ಭಜರಂಗದಳದಿಂದ ಕೊಲೆಯಾಗಿದ್ದರು. ಮಸೂದ್ ಹತ್ಯೆ ಮಾಡಿದವರು ಆತನ ಸ್ನೇಹಿತರೇ ಆಗಿದ್ದಾರೆ. ದಿನೇಶ್ ಕನ್ಯಾಡಿಯನ್ನು ಬೆಳ್ತಂಗಡಿ ಬಜರಂಗದಳದ ಅಧ್ಯಕ್ಷನೇ ಕೊಲೆ ಮಾಡಿದ್ದ ಆರೋಪ ಇದೆ. ಇನ್ನು ಜಲೀಲ್ ಪ್ರಕರಣ ವೈಯಕ್ತಿಕ ದ್ವೇಷದಿಂದ ನಡೆದಿದ್ದರೂ ಅಲ್ಲಿಯೂ ಹಿಂದೂ ಸಂಘಟನೆಯ ಕಾರ್ಯಕರ್ತರದ್ದೇ ಕೈವಾಡವಿದೆ ಎಂಬ ಆರೋಪವಿದೆ.
ಮಸೂದ್ ಕೂಲಿ ಕಾರ್ಮಿಕನಾಗಿದ್ದರೆ. ಜಲೀಲ್ ಸಣ್ಣದೊಂದು ಅಂಗಡಿ ನಡೆಸುತ್ತಿದ್ದರು. ಇನ್ನು ದಿನೇಶ್ ಕನ್ಯಾಡಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ದಲಿತ ಹೋರಾಟಗಾರರಾಗಿದ್ರು. ಇದೀಗ ಹೊಸ ಸರ್ಕಾರ ಬರುತ್ತಿದ್ದಂತೆ ಎಲ್ಲರ ಪೋಷಕರು, ಸಂಬಂಧಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಪ್ರಕರಣವನ್ನು ಮತ್ತೆ ತನಿ ಖೆ ಮಾಡಿ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು ಹಾಗೂ ನಮಗೂ ಪರಿಹಾರ ನೀಡಬೇಕು ಅಂತ ಸರ್ಕಾರವನ್ನು ಒತ್ತಾಯಿಸಿದ್ದಾರೆ.