ಮಂಗಳೂರು: ಮಂಗಳೂರಿನ ಸಿಟಿ ಸಮೂಹ ಸಂಸ್ಥೆಗಳು ಹಾಗೂ ಕೈಲ್ಕೆರೆ ರುಕ್ಮಿಣಿ ಶೆಟ್ಟಿ ಕಾಲೇಜು ಆಫ್ ನರ್ಸಿಂಗ್ ನ ವಾರ್ಷಿಕ ಕ್ರೀಡೋತ್ಸವವು ಮಂಗಳ ಕ್ರೀಡಾಂಗಣದಲ್ಲಿ 02/05/2023 ರಂದು ಜರಗಿತು.
ಫಿಟ್ನೆಸ್ ಇನ್ ಸ್ಟ್ರಕ್ಟರ್ ಹಾಗೂ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕೋಚ್’ಗಳಾದ ಶ್ರೀ ಕೌಶಿಕ್ ಬೋಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡೋತ್ಸವದ ವಿನ್ಯಾಸವನ್ನು (ಸಿನ್ಯಾಪ್ಸ್ 2023) ಅನಾವರಣಗೊಳಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ‘ವಿದ್ಯಾರ್ಥಿಗಳು ತಮ್ಮನ್ನು ಕ್ರೀಡಾಪಟುಗಳಾಗಿ ರೂಪಿಸಿಕೊಳ್ಳಲು ಇನ್ನೂ ಸಮಯಾವಕಾಶವಿದೆ. ತಾವೆಲ್ಲರೂ ಯೌವನಾವಸ್ಥೆಯಲ್ಲಿರುವುದರಿಂದ ಇನ್ನೂ ಕಾಲ ಮಿಂಚಿಲ್ಲ. ಮಾನವ ದೇಹ, ದೇವರ ಒಂದು ವಿಶೇಷ ರಚನೆ. ಈ ದೇಹವನ್ನು ಆಯಾ ಪ್ರಾಯಕ್ಕೆ ಸರಿಯಾಗಿ ಯಾವ ರೀತಿಯಲ್ಲೂ ಪರಿವರ್ತಿಸಿಕೊಳ್ಳಲು ಆವಕಾಶವಿದೆ. ಸತತ ಪ್ರಯತ್ನ ಶ್ರದ್ಧೆ, ಜೀವನ ಶೈಲಿ ಹಾಗೂ ಕಠಿಣ ವ್ಯಾಯಾಮದಿಂದ ನೀವು ಇದನ್ನು ಸಾಧಿಸಬಹುದು’ ಎಂಬ ಕಿವಿಮಾತು ಹೇಳಿದರು.
ಸಿಟಿ ಹಾಸ್ಪಿಟಲ್ ಟ್ರಸ್ಟ್ ಹಾಗೂ ನಂದಾವನ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ| ಕೆ. ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ “ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯು ತುಂಬಾ ಪಠ್ಯ ವಸ್ತುಗಳನ್ನು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಇಲ್ಲದಂತಾಗಿದೆ. ಆದರೆ, ಮಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ವಿಫುಲ ಅವಕಾಶ ಮತ್ತು ಸೌಲಭ್ಯಗಳಿವೆ. ವಿದ್ಯಾರ್ಥಿಗಳು ಕಾಲೇಜಿನ ಸಮಯದ ನಂತರ ತಮ್ಮ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡುವುದರ ಬದಲಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ದೇಹ ಹಾಗೂ ಮನಸ್ಸು ವಿಕಸನಗೊಳ್ಳುತ್ತದೆ” ಎಂದು ಬುದ್ಧಿಮಾತು ಹೇಳಿದರು.
ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು. ಸಿಟಿ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿ ಅನ್ವಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.