ಮಂಗಳೂರು: ಸಿಎಂ ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಕ್ಕೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆ ‘ಇಂದಿರಾ ಕ್ಯಾಂಟೀನ್’. ಆದರೆ ಮಂಗಳೂರು ನಗರದಲ್ಲಿನ ಆರು ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡುವ ಉರ್ವ ಸ್ಟೋರ್ನಲ್ಲಿರುವ ಇಂದಿರಾ ಕ್ಯಾಂಟಿನ್ ಸರಿಯಾದ ನಿರ್ವಹಣೆಯಿಲ್ಲದೆ ನಲುಗುತ್ತಿದೆ. ಮೇಲ್ಛಾವಣಿ ಸೋರುತ್ತಿದ್ದರೆ, ವಿದ್ಯುತ್ ಸಂಪರ್ಕದ ವೈರ್ಗಳು ಕಿತ್ತು ಹೋಗಿವೆ. ಸಿಸಿ ಕ್ಯಾಮರಾ ಕೈಕೊಟ್ಟಿದೆ. ಹೊರಗಡೆ ಇಂಟರ್ ಲಾಕ್ ಕುಸಿತಗೊಂಡಿದೆ. ಅಡುಗೆಮನೆಯ ಒಳಚರಂಡಿ ದುರವಸ್ಥೆಯಲ್ಲಿದೆ. ಇದು ಸದ್ಯದ ಇಂದಿರಾ ಕ್ಯಾಂಟೀನ್ನ ದುಃಸ್ಥಿತಿ.
ಉರ್ವಸ್ಟೋರ್ ಸೇರಿದಂತೆ ಲೇಡಿಗೋಷನ್, ಪಂಪ್ ವೆಲ್, ಕಾವೂರು, ತೊಕ್ಕೊಟ್ಟು, ಸುರತ್ಕಲ್ ನಲ್ಲಿ ಇಂದಿರಾ ಕ್ಯಾಂಟೀನ್ಗಳಿವೆ. ಎಲ್ಲಾ ಕ್ಯಾಂಟೀನ್ಗಳ ಸ್ಥಿತಿ ಉರ್ವಸ್ಟೋರ್ನಲ್ಲಿರುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಸರಿಯಾದ ನಿರ್ವಹಣೆಯಿಲ್ಲದಿರುವುದೇ ಇದಕ್ಕೆ ಕಾರಣ. ಈಗಲೂ ಸಾಕಷ್ಟು ಮಂದಿ ಇಂದಿರಾ ಕ್ಯಾಂಟಿನ್ ಊಟ – ಉಪಹಾರವನ್ನು ಅವಲಂಬಿಸುತ್ತಿದ್ದಾರೆ. ಆದರೆ ಮಳೆಗಾಲಕ್ಕೆ ಮೇಲ್ಛಾವಣಿ ಸೋರುವಿಕೆಯಿಂದ ಕ್ಯಾಂಟಿನ್ ಒಳಗಡೆ ಕೆಲಸ ಮಾಡಲು ಅಸಾಧ್ಯವಾಗುವ ಪರಿಸ್ಥಿತಿಯಿದೆ. ಕಟ್ಟಡಕ್ಕೆ ಸಮರ್ಪಕ ಕಾಯಕಲ್ಪ ಒದಗಿಸದಿದ್ದಲ್ಲಿ ಇಂದಿರಾ ಕ್ಯಾಂಟಿನ್ ಮುಚ್ಚುವ ಸ್ಥಿತಿ ಎದುರಾದೀತು.
5ವರ್ಷಗಳ ಹಿಂದೆ ಇಂದಿರಾ ಕ್ಯಾಂಟೀನ್ಗಳು ರೆಡಿಮೆಡ್ ಮಾದರಿಯಲ್ಲಿ ನಿರ್ಮಾಣವಾಗಿತ್ತು. ಅದರ ಪರಿಣಾಮ ಮೇಲ್ಛಾವಣಿ ಸೋರುವುದು, ಬಿರುಕು ಬಿಟ್ಟಿರುವುದು ಕಂಡು ಬರುತ್ತಿದೆ. 6 ಇಂದಿರಾ ಕ್ಯಾಂಟೀನ್ಗಳಿಗೆ ಪ್ರತಿ ತಿಂಗಳು ತಗಲುವ ವೆಚ್ಚದ ಶೇ.70ನ್ನು ಮನಪಾ, ಶೇ.30ನ್ನು ಕಾರ್ಮಿಕ ಇಲಾಖೆ ಪಾವತಿಸಬೇಕು. ಆಹಾರ ಸರಬರಾಜು ಮಾಡಿದ 60 ದಿನಗಳೊಳಗೆ ಮೊತ್ತ ಪಾವತಿ ಮಾಡಬೇಕಾಗಿದೆ. ಕಾರ್ಮಿಕ ಇಲಾಖೆಯಿಂದ ಬರಬೇಕಾಗಿದ್ದ ಮೊತ್ತ ಇಲ್ಲಿಯವರೆಗೆ ಪಾವತಿಯಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಮೊತ್ತ ಬರದೆ ಕ್ಯಾಂಟಿನ್ ಮುಂದುವರಿಸುವುದು ಅಸಾಧ್ಯವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ರಾಜ್ಯಾದ್ಯಂತ ಎಲ್ಲಾ ಇಂದಿರಾ ಕ್ಯಾಂಟೀನ್ಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಳಿಸುವುದಾಗಿ ಹೇಳಿದ್ದರು. ಆದ್ದರಿಂದ ಶೀಘ್ರದಲ್ಲೇ ಇಂದಿರಾ ಕ್ಯಾಂಟಿನ್ ಸರಿಯಾದ ನಿರ್ವಹಣೆಯ ಮೂಲಕ ಮತ್ತೆ ಉತ್ತಮ ಸೇವೆ ನೀಡಬಹುದೇ ಎಂದು ಕಾದು ನೋಡಬೇಕಿದೆ