ಮಂಗಳೂರು: ಮಾತಾ ಅಮೃತಾನಂದಮಯಿ ಮಠದಲ್ಲಿ ಅಮೃತ ಜ್ಯೋತಿರ್ವಿಜ್ಞಾನ ಅದ್ಯಯನ ಕೇಂದ್ರವನ್ನು ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಅನಂತರ ಆಶೀರ್ವಚನ ನೀಡಿದ ಅವರು ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿನ ಜನತೆಗೆ ಶ್ರೀ ಬ್ರಹ್ಮಸ್ಥಾನ ಕ್ಷೇತ್ರ ಹಾಗೂ ಅಮೃತ ವಿದ್ಯಾಲಯಂ ವಿದ್ಯಾಲಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಂಡುಬರುವ ಮನುಷ್ಯನ ಸಂಕಷ್ಟಗಳಿಗೆ ಶಾಸ್ತ್ರೋಕ್ತ ಪರಿಹಾರಗಳನ್ನು ಸರಳವಾಗಿ ನಮಗಾಗಿ ನಾವೇ ಮಾಡುವ ಮೂಲಕ ಅಸಹಾಯಕರಿಗೆ ಫಲಪ್ರದ ಕ್ಷೇತ್ರವೆನಿಸಿದೆ. ಅಲ್ಲದೆ ಜ್ಯೋತಿಷ್ಯ ಶಾಸ್ತ್ರವು ಭಾರತದ ಶ್ರೇಷ್ಠ ಕೊಡುಗೆಯಾಗಿದ್ದು ಆತ್ಮೋನ್ನತಿಗಾಗಿ ಜ್ಯೋತಿಷ್ಯ ಸಹಕಾರಿಯಾಗಿದೆ ಎಂದರು.
ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ್ ಪೆರ್ಲ ಅವರು ಸಂಸ್ಥೆಯ ಸ್ಥಾಪನೆಯ ಉದ್ದೇಶ, ನೂತನ ಯೋಜನೆಗಳು ಹಾಗೂ ಬ್ರಹ್ಮಸ್ಥಾನ ಕ್ಷೇತ್ರದ ವಿಶೇಷತೆಗಳ ಬಗ್ಗೆ ಮಾತಾಡಿದರು. ಉನ್ನತ ಅಧ್ಯಯನ ಕೇಂದ್ರವು ಕರಾವಳಿ ಜಿಲ್ಲೆಗಳಿಗೆ ಒಂದು ಕೊಡುಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಡೀ ಜ್ಯೋತಿಷ್ಯದ ಬಗ್ಗೆ ನಡೆದ ವಿಚಾರ ಸಂಕೀರ್ಣದಲ್ಲಿ ಮೈಸೂರಿನ ಜ್ಯೋತಿರ್ವಿಜ್ಞಾನಿ ಪದ್ಮಾವತಿ ಎಸ್. ಭಟ್ ನಾಡಿ ವಿಜ್ಞಾನದ ಪರಿಚಯ ಹಾಗೂ ಅದರ ಮಹತ್ವಪೂರ್ಣ ಅಂಶಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಜ್ಯೋತಿಷ್ಯ ಗುರು ಪ್ರವೀಣ್ ಚಂದ್ರ ಶರ್ಮರಿಗೆ ಗುರುವಂದನೆ ಹಾಗೂ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ಮೂರು ತಿಂಗಳ ಜ್ಯೋತಿಷ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಮುರಳೀಧರ ಶೆಟ್ಟಿಯವರು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದ ಫೇಸ್ ಬುಕ್ ಪುಟಗಳ ಅನಾವರಣ ಮಾಡಿದರು. ವೈ.ಎನ್.ಸಾಲ್ಯಾನ್ ಸ್ವಾಗತಿಸಿದರು. ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.ಡಾ.ದೇವದಾಸ್ ಪುತ್ರನ್ ವಂದಿಸಿದರು.
ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜ್ಯೋತಿಷ್ಯಾಸಕ್ತರು ಹಾಗೂ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.