ಮಂಗಳೂರು: ಪಟ್ಲ ಸಂಭ್ರಮ-೨೦೨೩ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಎರಡು ದಿನಗಳ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯಲ್ಲಿ ಒಟ್ಟು ೩೪ ತಂಡಗಳು ಭಾಗವಹಿಸಿದ್ದವು. ಸ್ಪರ್ಧಾ ಅವಧಿ ೪೫ ನಿಮಿಷಗಳಾಗಿದ್ದು ಪ್ರತಿ ತಂಡದಲ್ಲಿ ಕನಿಷ್ಠ ೧೦ ಕಲಾವಿದರು ವೇಷಧಾರಿಗಳಾಗಿ ಪಾಲ್ಗೊಳ್ಳುವ ನಿಯಮವಿತ್ತು. ಹೈಸ್ಕೂಲ್ ವಿಭಾಗದಲ್ಲಿ ೧೨ ಹಾಗೂ ಕಾಲೇಜು ವಿಭಾಗದಲ್ಲಿ ೨೨ ತಂಡಗಳ ಒಟ್ಟು ೬೧೨ ಕಲಾವಿದರು ಭಾಗವಹಿಸಿದ್ದರು.
ಹಿಮ್ಮೇಳ ಕಲಾವಿದರಾಗಿ ಹೊರಗಿನವರನ್ನು ಬಳಸಿಕೊಳ್ಳಲು ಅವಕಾಶ ಇದ್ದರೂ ಹಲವು ಶಾಲೆ ಕಾಲೇಜುಗಳ ತಂಡದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಿಮ್ಮೇಳದಲ್ಲಿದ್ದು ಗಮನಸೆಳೆದಿದ್ದಾರೆ. ಹಿಮ್ಮೇಳದವರಿಗೆ ಒಂದು ವಿಭಾಗದಲ್ಲಿ ಒಂದೇ ತಂಡದಲ್ಲಿ ಭಾಗವಹಿಸಬೇಕು ಎನ್ನುವ ನಿಯಮವಿದ್ದುದರಿಂದ ೨೫ಕ್ಕೂ ಹೆಚ್ಚು ಭಾಗವತರು, ೬೦ಕ್ಕೂ ಹೆಚ್ಚು ಚೆಂಡೆ ಮದ್ದಳೆ ವಾದಕರು ಭಾಗವಹಿಸಿದ್ದರು.
ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಅನುಕ್ರಮವಾಗಿ ರೂ. ೫೦,೦೦೦/-, ರೂ. ೩೦,೦೦೦/- ಮತ್ತು ರೂ. ೨೦,೦೦೦/- ನೀಡಲಾಗಿದ್ದು, ಉಳಿದ ಎಲ್ಲಾ ತಂಡಗಳಿಗೆ ರೂ. ೧೦,೦೦೦/- ಗೌರವಧನ ನೀಡಲಾಗಿದೆ.
ವೈಯಕ್ತಿಕ ವಿಭಾಗ ವಿಜೇತರಿಗೆ ಪ್ರಥಮ ರೂ. ೫,೦೦೦/-, ದ್ವಿತೀಯ ರೂ. ೩,೦೦೦/- ಹಾಗೂ ತಂಡಗಳ ಶ್ರೇಷ್ಠ ಕಲಾವಿದರಿಗೆ ತಲಾ ರೂ. ೨,೦೦೦/- ದೊಂದಿಗೆ ಪ್ರಶಂಸಾ ಫತ್ರ, ಶಾಶ್ವತ ಫಲಕ, ಪದಕಗಳನ್ನು ನೀಡಲಾಗಿದೆ.
ಸಮಯಪ್ರಜ್ಞೆಯೊಂದಿಗೆ ಶಿಸ್ತುಬದ್ಧವಾಗಿ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಎಲ್ಲರನ್ನೂ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ ಅಭಿನಂದಿಸಿದ್ದಾರೆ.