ಬಂಟ್ವಾಳ: ವಿಧಾನಸಭೆಗೆ ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆದಿದೆ. ಬೆಳಗ್ಗಿನಿಂದಲೇ ಹುರುಪಿನಿಂದ ಮತಗಟ್ಟೆಗೆ ಬಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
ಬೆಳಿಗ್ಗೆ ಪುದು, ಬಂಟ್ವಾಳ ಹಾಗೂ ಅನಂತಾಡಿ ಮತಗಟ್ಟೆಯ ಮತಯಂತ್ರದಲ್ಲಿ ಆರಂಭಿಕ ದೋಷ ಕಂಡುಬಂದಿತ್ತು. ತಕ್ಷಣ ಅಧಿಕಾರಿಗಳು ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯ ವಿಟ್ಲ ಮೇಗಿನಪೇಟೆ ಮತಗಟ್ಟೆಯಲ್ಲಿ ಎರಡು ಗುಂಪುಗಳನಡುವೆ ಮಾತಿನ ಚಕಮಕಿ ಹೊರತುಪಡಿಸಿದರೆ ಉಳಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಸುಸೂತ್ರವಾಗಿ ನಡೆದಿದೆ.
ಬೆಂಜನಪದವು ಮೂಡಾಯಿಕೋಡಿ ಧಾರೆಕಟ್ಟೆ ಭಾಗದಲ್ಲಿ ಮನೆ ಮನೆ ಮತ ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮನೆ ಮನೆಗೆ ೧೨ಡಿ ಪತ್ರವನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬಂತು.
ಹೀಗಾಗಿ ಈ ಭಾಗದ ಮತದಾರರಾದ ವಿಕ್ಟರ್ ಬರೆಟ್ಟೋ ಅವರನ್ನು ವೀಲ್ ಚೇರ್ ಹಾಗೂ ನಡೆಯಲು ಸಾಧ್ಯವಾಗದ ಐತಪ್ಪ ಬೆಳ್ಚಡ ಅವರನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಮತ ಚಲಾಯಿಸಲಾಯಿತು. ತೊಡಂಬಿಲದಲ್ಲಿ ವೃದ್ಧೆಯೊಬ್ಬರನ್ನು ವೀಲ್ ಚೆಯರ್ ನಲ್ಲಿ ಕರೆದುಕೊಂಡು ಬರಲಾಗಿತ್ತು.
ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಮಂಗಳೂರು ಉತ್ತರ ಕ್ಷೇತ್ರದ ತೆಂಕ ಎಡಪದವು ಮತಗಟ್ಟೆಯಲ್ಲಿ ಮೊದಲಿಗರಾಗಿ ಮತಚಲಾಯಿಸಿದರು. ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈಯವರು ತೊಡಂಬಿಲ ಸೇಕ್ರೆಡ್ ಚರ್ಚ್ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಬಂದು ಮತಚಲಾಯಿಸಿದರು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಎಸ್ ವಿ ಎಸ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಮತಚಲಾಯಿಸಿದರು.
ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮತಗಟ್ಟೆಗಳ ಸಮೀಪದ ತಮ್ಮ ಬೂತ್ ಗಳಿಗೆ ತೆರಳಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರೂ, ಬಂಟ್ವಾಳ ಕ್ಷೇತ್ರದ ವಿವಿಧ ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ವಿಟ್ಲ ಸುತ್ತಮುತ್ತಲಿನಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಯಶಸ್ವಿ:
ವಿಟ್ಲ ಹೋಬಳಿ ಪ್ರದೇಶ ಬಂಟ್ವಾಳ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿದ್ದು, ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೊಳಂತಿಮೊಗರು ಸರಕಾರಿ ಶಾಲೆ ಮತಗಟ್ಟೆ ಸಂಖ್ಯೆ ೨೦೬ರಲ್ಲಿ ಸಂಜೆ ೫.೩೦ ಗಂಟೆ ವರೆಗೂ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಇಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಮತದಾರರಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ ಒಂದೇ ಕೇಂದ್ರ ಮಾಡಿದ್ದರಿಂದ ಮತದಾನ ಪ್ರಕ್ರಿಯೆ ನಿದಾನಗತಿಯಲ್ಲಿ ನಡೆದಿದೆ. ೬ ಗಂಟೆ ವೇಳೆಗೆ ೩೦ ರಷ್ಟು ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು, ಮತದಾನ ಪ್ರಕ್ರಿಯೆ ಮುಂದುವರಿದ್ದು, ೬ ಗಂಟೆಗೆ ಪ್ರಮುಖ ಗೇಟ್ ಬಂದ್ ಮಾಡಲಾಗಿದೆ. ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮುರುವ ಸರ್ಕಾರಿ ಶಾಲೆಯಲ್ಲಿ ಮತ್ತು ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ ಅವರು ಕನ್ಯಾನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ
ಪುತ್ತೂರು ೨೦೬ ಕ್ಷೇತ್ರ ವ್ಯಾಪ್ತಿಯ ವಿಟ್ಲ ಮೇಗಿನಪೇಟೆ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮುಂದೆ ಕಾಂಗ್ರೆಸ್ ಜತೆಗೆ ಒಪ್ಪಂದಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಮಾಡಿದ್ದು ಮಾತಿನ ಚಮಕಿಗೆ ಕಾರಣವಾಗಿದೆ.
ವಿಟ್ಲ ಮೇಗಿನಪೇಟೆ ಮತಗಟ್ಟೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ ಸಂದರ್ಭದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದರು. ಈ ಸಂದರ್ಭ ಬೂತ್ ನ ಹೊರಗಡೆ ಕುಳಿತ್ತಿದ್ದ ಬಿಜೆಪಿ ಕಾರ್ಯಕರ್ತರು ನೀವಿಬ್ಬರೂ ಒಂದೆಯೇ ಒಟ್ಟೋಟ್ಟಾಗಿ ಬರುತ್ತಿದ್ದೀರಿ? ನಿಮ್ಮೊಳಗಡೆ ಹೊಂದಾಣಿಕೆಯೇ ಎಂದು ಅರುಣ್ ಪುತ್ತಿಲ ಬೆಂಬಲಿಗರಿಗೆ ಪ್ರಶ್ನಿಸಿದರು. ಈ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಾರೂ ಏನು ಎಂಬುದು ಮೇ೧೩ ಗೊತ್ತಾಲಿದೆ. ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಮಹಾಲಿಂಗೇಶ್ವರನ ಮುಂದೆ ಬಂದು ಹೇಳಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪುತ್ತಿಲ ಬೆಂಬಲಿಗರು ಬಿಜೆಪಿ ಬೆಂಬಲಿಗರ ನಡುವೆ ನೂಕಾಟ ತಳ್ಳಾಟ ಮಾಡಿದ ಘಟನೆ ನಡೆದಿದೆ.
ಆಟೋ ರಿಕ್ಷಾದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಸ್ವಾಮೀಜಿ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಿತ್ತನಡ್ಕ ಹಿ.ಪ್ರಾ ಶಾಲೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಾಮಾನ್ಯರಂತೆ ಆಟೋ ರಿಕ್ಷಾದಲ್ಲಿ ಬಂದು ಮತಚಲಾಯಿಸಿದರು.
ಆಟೋ ರಿಕ್ಷಾದಲ್ಲಿ ಮತಗಟ್ಟೆಗೆ ಆಗಮಿಸಿದ ಸ್ವಾಮೀಜಿ ಸರತಿಸಾಲಿನಲ್ಲಿ ನಿಂತು ಮತಚಲಾವಣೆ ಮಾಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿ ಆದರ್ಶವಾದ ರಾಷ್ಟ್ರ ನಿರ್ಮಾಣಕ್ಕೆ ಒಂದು ಅವಕಾಶವೇ ಮತದಾನವಾಗಿದೆ. ಯೋಗ್ಯವಾದ ವ್ಯಕ್ತಿ ಆಯ್ಕೆ ಮಾಡಬೇಕು. ರಾಷ್ಟ್ರ ನಿರ್ಮಾಣದ ಆದರ್ಶ ನಾಯಕನನ್ನು ಆಯ್ಕೆ ಮಾಡೋದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.