ಮಂಗಳೂರು: ಮೂಲ್ಕಿ – ಮೂಡುಬಿದಿರೆಯನ್ನು ಸಮಗ್ರ ಅಭಿವೃದ್ಧಿಯೊಂದಿಗೆ ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಕನಸು ನನ್ನದು ಎಂದು ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ವಿಜಯನಾಥ ವಿಟ್ಠಲ ಶೆಟ್ಟಿ ಹೇಳಿದರು.
ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣೆಯಲ್ಲಿ ಜನರ ಹಾರೈಕೆಯಿಂದ ಶಾಸಕನಾದರೆ 24 ಗಂಟೆ ಕಾಲ ಕುಡಿಯುವ ನೀರು ಪೂರೈಕೆ, ಶೇ. 100 ವಿದ್ಯುತ್, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಉನ್ನತೀಕರಣ, ಉದ್ಯೋಗ ಸೃಷ್ಟಿ ಸ್ವಚ್ಛತೆಗೆ ಆದ್ಯತೆ, ತ್ಯಾಜ್ಯ ನಿರ್ವಹಣೆ ಸುಸೂತ್ರಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಅತ್ಯುತ್ತಮ ಆರೋಗ್ಯ ಸೇವೆಯೊಂದಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, 24 ಗಂಟೆ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದರು. ಪ್ರವಾಸೋದ್ಯಮ ಪೂರಕ ವ್ಯವಸ್ಥೆ, ಕ್ರೀಡಾಂಗಣ ನಿರ್ಮಾಣ, ಕ್ರೀಡಾ ಪ್ರತಿಭೆಗಳಿಗೆ, ಕಂಬಳ ಕ್ರೀಡೆಗೆ ಪ್ರೋತ್ಸಾಹ ತುಳು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಣೆ, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ ದೃಷ್ಟಿಯಿಂದ ಸರ್ವ ಪ್ರಯತ್ನ ಮಾಡಲಾಗುವುದು. ಕ್ಷೇತ್ರ ವ್ಯಾಪ್ತಿಯ ಹೋಬಳಿವಾರು ಕಿಡ್ನಿ ಡಯಾಲಿಸಿಸಿ ಕೇಂದ್ರ ಸ್ಥಾಪನೆಗೆ, ಅಗ್ನಿಶಾಮಕ ಉಪವಿಭಾಗ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.