ಪುತ್ತೂರು: ಬಿಜೆಪಿ ಮುಖಂಡರ ಅವಹೇಳನಕಾರಿ ಬ್ಯಾನರ್ ಅಳವಡಿಕೆ ಪ್ರಕರಣ. ಪ್ರಕರಣದ ಆರೋಪಿಗಳ ಮೇಲೆ ಪೋಲೀಸ್ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿದರು.
ಘಟನೆಯ ವಾಸ್ತವಿಕ ತನಿಖೆಯಾಗಬೇಕು. ಊಹಾಪೋಹಗಳನ್ನು ಮಾಡಿ ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಹೇಳಿದರು. ಯಾರೋ ಒತ್ತಡ ಹಾಕಿದರೆಂದು ಈ ರೀತಿ ಕೆಲಸ ಮಾಡಬಾರದು ಎಂದರು. ನಾಳೆ ಕಾಂಗ್ರೆಸ್ ನವರು ಕೊಲೆ ಮಾಡಿ ಎಂದರೆ ಪೊಲೀಸರು ಕೊಲೆ ಮಾಡುತ್ತಾರೆಯೇ ? ಕಾಂಗ್ರೆಸ್ ಸರಕಾರ ಬಂದ ಬಳಿಕ ಕೆಲವು ಪೊಲೀಸ್ ಅಧಿಕಾರಿಗಳು ಈ ರೀತಿ ನಡೆದುಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ವಿಧಾನಸಭೆಯಲ್ಲಿ ಇಂಥ ವಿಚಾರಗಳನ್ನು ಕೈಗೆತ್ತಿಕೊಳ್ಳುವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೊಂಚ ಅಸಮಾಧಾನ ಎದ್ದಿದೆ. ಹಿಂದೂ ಕಾರ್ಯಕರ್ತರು ಪಕ್ಷೇತರರ ಜೊತೆ ಹೋಗಿದ್ದಾರೆ. ಹಾಗೆಂದು ಅವರು ಬಿಜೆಪಿ ಕಾರ್ಯಕರ್ತರೇ. ಗೊಂದಲವನ್ನು ಸರಿ ಮಾಡುವ ಕೆಲಸವನ್ನು ಕೇಂದ್ರ ನಾಯಕರು ಮಾಡಲಿದ್ದಾರೆ. ಈ ವಿಚಾರವನ್ನು ಕೇಂದ್ರ ನಾಯಕರಿಗೆ ಮುಟ್ಟಿಸುವ ಕೆಲಸ ಮಾಡುವೆ. ಸ್ವಪ್ರತಿಷ್ಠೆಗಾಗಿ ಈ ರೀತಿಯ ಗೊಂದಲಕ್ಕೆ ಅವಕಾಶವಿಲ್ಲ. ತಪ್ಪು ಮಾಡಿದ್ದರೆ ಕ್ಷಮೆ ಕೇಳಿ ಮುಂದೆ ನಡೆಯಬೇಕು. ಇದು ಎರಡೂ ಕಡೆಯವರಿಗೂ ಅನ್ವಯಿಸುತ್ತದೆ. ಹಿಂದೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ನ ತಾಲೀಬಾನ್ ಸರಕಾರ ನಾಳೆಯಿಂದ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗೋರಕ್ಷಕರ ಹತ್ಯೆ,ಕಾರ್ಯಕರ್ತರ ಹತ್ಯೆ ನಡೆದಿದೆ. ಇದೀಗ ಮತ್ತೆ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ದೇಶದಲ್ಲಿ ಹಿಂದೂಗಳ ರಕ್ಷಣೆ ಬಿಜೆಪಿಯ ಕರ್ತವ್ಯ ಎಂದು ಹೇಳಿದರು.