ಪುತ್ತೂರು: ಪುತ್ತೂರು ಅನೇಕ ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಸ್ಥಳ. ಅದರೆ ಅದೇ ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದದ್ದೆ ತಡ ಪೊಲೀಸರ ಕಾರ್ಯ ವೈಖರಿ ಕೂಡ ಕಾಂಗ್ರೆಸ್ ರೀತಿಯಲ್ಲೇ ಇದೆ ಎನ್ನುವುದಕ್ಕೆ ಪುತ್ತೂರಿನ ಘಟನೆ ಸಾಕ್ಷಿ ಎಂದು ಹಿಂದು ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ತನ್ನ ಆಕ್ರೋಶ ಹೊರಹಾಕಿದ್ದಾರೆ. ಕರಾವಳಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಈಗಾಗಲೇ ಸರ್ಕಾರ ಬದಲಾದ ಹಾಗೆಯೇ ಪೊಲಿಸರ ವರ್ತನೆ ಕೂಡ ಬದಲಾಗಿದೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡರ ಊರಲ್ಲೇ ಬ್ಯಾನರ್ ಕಟ್ಟಿದ ವಿಚಾರಕ್ಕೆ ಹಿಂದು ಯುವಕರ ಮೇಲೆ ಹಲ್ಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದೌರ್ಜನ್ಯ ವೆಸಗಿದ ಅಧಿಕಾರಿಗಳನ್ನು ಕೇವಲ ಅಮಾನತು ಮಾಡಿದರೆ ಸಾಲದು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದಿದ್ದಾರೆ.
ಇಲ್ಲಿ ಇರುವಂಥ ಅನೇಕ ಬಿಜೆಪಿ ನಾಯಕರು ಹಿಂದುತ್ವ, ಸಂಘ ಪರಿವಾರದ ಹೆಸರಿನಲ್ಲಿ ಬಿಜೆಪಿಯಲ್ಲಿ ಬೇರೆ ಬೇರೆ ಸ್ಥಾನಮಾನ ಪಡೆದಿದ್ದಾರೆ. ಆದರೆ ಈಗ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಬೇರೆಯವರು ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ಅಂಥ ಕಾರ್ಯಕರ್ತರನ್ನು ತುಳಿಯುವ, ಧಮನ ಮಾಡುವ ಕಾರ್ಯವನ್ನು ಬಿಜೆಪಿಯ ಕೆಲವು ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.