ಪುತ್ತೂರು: ಪುತ್ತೂರು ಕ್ಷೇತ್ರದಲ್ಲಿ ಕಟ್ಟರ್ ಹಿಂದುತ್ವವಾದಿ ಮತ್ತು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್ಕುಮಾರ್ ಪುತ್ತಿಲ ಅವರ ಬಂಡಾಯದ ಪರಿಣಾಮವಾಗಿ ಬಿಜೆಪಿ ನಿದ್ದೆಗೆಟ್ಟಿದೆ. ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಪುತ್ತಿಲ ಟಿಕೆಟ್ ಸಿಗದ ಬಳಿಕ ಬಿಜೆಪಿ ನಾಯಕರ ಯಾವ ಮನವೊಲಿಕೆಗೂ ಜಗ್ಗದೆ ಬಂಡಾಯದ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ.
ಕ್ಷೇತ್ರದಲ್ಲಿ ಅವರಿಗೆ ವ್ಯಕ್ತವಾಗುತ್ತಿರುವ ಬೆಂಬಲವನ್ನು ನೋಡುವಾಗ ಈ ಸಲ ಪುತ್ತೂರು ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ. ಅಂತಿಮವಾಗಿ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭವಾಗಿ ಬಿಜೆಪಿಯಿಂದಲೇ ಕಾಂಗ್ರೆಸ್ಗೆ ಹೋಗಿ ಅಭ್ಯರ್ಥಿಯಾಗಿರುವ ಅಶೋಕ್ಕುಮಾರ್ ರೈ ಗೆಲ್ಲುವ ಸಾಧ್ಯತೆಯಿದೆ ಎಂಬ ಸ್ಥಿತಿ ಈಗ ಪುತ್ತೂರಿನಲ್ಲಿದೆ.
ಪುತ್ತೂರಿಗೆ ಪುತ್ತಿಲ ಎಂಬ ಘೋಷವಾಕ್ಯದಡಿ ಹಿಂದೂ ಕಾರ್ಯಕರ್ತರು ಅರುಣ್ ಪರ ಪ್ರಚಾರ ನಡೆಸುತ್ತಿದ್ದಾರೆ. ಪುತ್ತಿಲ ಗೆಲ್ಲುವುದಕ್ಕಿಂತೂ ಬಿಜೆಪಿ ಸೋಲಬೇಕೆನ್ನುವುದು ಪುತ್ತಿಲ ಬೆಂಬಲಿಗರ ತೀವ್ರವಾದ ಹಠ. ಬಿಜೆಪಿಯಿಂದ ಕಣಕ್ಕಿಳಿದಿರುವ ಆಶಾ ತಿಮ್ಮಪ್ಪ ಅವರು ಸೌಮ್ಯ ಸ್ವಭಾವದವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಇದ್ದರೂ ಬಂಡಾಯ ಅಭ್ಯರ್ಥಿಯ ವಿರುದ್ಧ ಸೆಣಸಾಡುವಷ್ಟು ʼಅಗ್ರೆಸ್ಸಿವ್ನೆಸ್ʼ ಅವರಲ್ಲಿ ಇಲ್ಲ ಎಂಬ ಅಭಿಪ್ರಾಯವಿದೆ. ಜತೆಗೆ ಅವರು ಪುತ್ತೂರಿನವರು ಅಲ್ಲ ಎಂಬ ಒಂದು ಮೈನಸ್ ಅಂಶವೂ ಇದೆ.
ಟಿಕೆಟ್ ವಂಚಿತ ಸಂಜೀವ ಮಠಂದೂರು ಪ್ರತಿಭಟನೆಗೆ ಮುಂದಾಗದಿದ್ದರೂ, ಪುತ್ತಿಲ ಅವರಿಗೂ ಟಿಕೆಟ್ ನೀಡದೆ ಇರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಮಠಂದೂರು ಬದಲಿಗೆ ಜಾತಿ ಸಮೀಕರಣ ಈಡೇರಿಸಲು ಬಿಜೆಪಿ ಹೊಸ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿದೆ ಎನ್ನಲಾಗಿದೆ. ಪುತ್ತೂರು ಟಿಕೆಟ್ ನಿರ್ಧಿರಿಸುವಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂಬ ಗುಸುಗುಸು ಇದೆ. ನಳಿನ್ ಒತ್ತಾಯದಿಂದಲೇ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಪುತ್ತೂರಿನ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಪುತ್ತಿಲ ಬೆಂಬಲಕ್ಕೆ ನಿಂತಿದ್ದಾರೆ. ಗೆಲ್ಲದಿದ್ದರೂ ಪರವಾಗಿಲ್ಲ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ನಳಿನ್ಗೆ ಮುಖಭಂಗ ಮಾಡಬೇಕು ಎನ್ನುವುದು ಅವರ ಹಠ. ಹಿಂದಿನಿಂದಲೂ ನಳಿನ್ ಪುತ್ತೂರು ರಾಜಕೀಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸುತ್ತಿದ್ದಾರೆ ಎಂಬ ಅಸಮಾಧಾನ ಇಲ್ಲಿನ ನಾಯಕರಲ್ಲಿದೆ. ಅದಕ್ಕೆ ತಕ್ಕಂತೆ ಈ ಸಲ ಟಿಕೆಟ್ ಆಯ್ಕೆಯಲ್ಲಿ ಆಗಿರುವ ಬೆಳವಣಿಗೆ ಅವರ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿದೆ.
ಬಿಜೆಪಿಯ ಪರಂಪರಾಗತ ಬೆಂಬಲಿಗರಾದ ಬ್ರಾಹ್ಮಣರು ಕೂಡ ಈ ಸಲ ಪುತ್ತಿಲ ಬೆಂಬಲಕ್ಕೆ ನಿಂತಿದ್ದಾರೆ. ಸಮುದಾಯದ ಅಭ್ಯರ್ಥಿ ಎನ್ನುವುದು ಒಂದು ಕಾರಣವಾದರೆ ನಳಿನ್ ಸದ್ದಡಗಿಸಬೇಕೆನ್ನುವುದು ಇನ್ನೊಂದು ಕಾರಣ. ಪುತ್ತೂರಿನಲ್ಲಿ ಬಿಗಿ ಹಿಡಿತ ಹೊಂದಿರುವ ಆರ್ಎಸ್ಎಸ್ ಕೂಡ ಈ ಬಾರಿ ಅಲ್ಲಿ ಏನೂ ಮಾಡಲಾಗದೆ ಕೈಕಟ್ಟಿ ನೋಡುವಂತಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರಂಥ ಹಿರಿಯರ ಮಾತಿಗೂ ಅರುಣ್ ಕುಮಾರ್ ಪುತ್ತಿಲ ಸೊಪ್ಪು ಹಾಕಲಿಲ್ಲ.
ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಜೆಪಿಗೆ ರಾಜೀನಾಮೆ ನೀಡಿ ವಿರೋಧ ಪಕ್ಷಕ್ಕೆ ಸೇರಿದ್ದ ಅಶೋಕ್ಕುಮಾರ್ ರೈ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವುದರಿಂದ ಬಿಜೆಪಿಗೆ ಪುತ್ತಿಲ ಸ್ವತಂತ್ರ ಅಭ್ಯರ್ಥಿಯಾಗುವುದು ಪ್ರಬಲ ಸವಾಲಾಗಿದೆ. ಕೇಸರಿ ಪಕ್ಷದ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಯಾಗಿರುವ ಎಸ್ಡಿಪಿಐನ ವಿವಾದಾತ್ಮಕ ಅಭ್ಯರ್ಥಿ ಶಾಫಿ ಬೆಳ್ಳಾರೆ ವಿರುದ್ಧ ತೀವ್ರ ಪ್ರಚಾರ ನಡೆಸಿದರೂ ಅದರ ಲಾಭ ಪಡೆಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜೈಲಿನಿಂದ ಎಸ್ಡಿಪಿಐ ಪರವಾಗಿ ಸ್ಪರ್ಧಿಸಿದ್ದರು. ಹಾಗಾಗಿ ಇದು ಹಿಂದೂಗಳ ಅಸ್ತಿತ್ವದ ಪ್ರಶ್ನೆಯಾಗಿತ್ತು. ಪುತ್ತೂರಿನಲ್ಲಿ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸಿಗರು ಇದ್ದಾರೆ. ಪುತ್ತಿಲ ಪರವಾಗಿರುವವರು ಪುತ್ತೂರಿಗೆ ಪುತ್ತಿಲ ಗ್ಯಾರಂಟಿ ಎಂಬ ಭರವಸೆಯಲ್ಲಿದ್ದಾರೆ.