ಪುತ್ತೂರು: ಬಿಜೆಪಿ ಮುಖಂಡರ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿರುವುದು ಹಾಗೂ ಪ್ರಕರಣದಲ್ಲಿ ಬಂಧಿತ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದನ್ನು ಹಿಂದೂ ಸೇನೆ ತೀವ್ರವಾಗಿ ಖಂಡಿಸಿದೆ ಎಂದು ಪುತ್ತೂರು ಹಿಂದೂ ಸೇನೆಯ ಸ್ಥಾಪಕಾಧ್ಯಕ್ಷ ಸತೀಶ್ ರೈ ನಡುಬೈಲು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಸಮಾಜಕೋಸ್ಕರ ಹೋರಾಟ ಮಾಡಿರುವ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗುವಂತಹ ಮನಸ್ಥಿತಿ ಖೇದಕರ. ಇದನ್ನು ಯಾವ ಹಿಂದೂವು ಕ್ಷಮಿಸಲಾರ. ಇಂತಹ ಹೇಳಿಕೆಗಳು ಆ ನಾಯಕರ, ಪಕ್ಷಗಳ ನಿಜವಾದ ಮುಖವಾಡವನ್ನು ತೆರೆದಿಟ್ಟಿದೆ. ಹಾಗಾಗಿ ಹಿಂದೂ ಸಮಾಜದ ಪರ ನಿಜವಾಗಿ ಇರುವವರು ಯಾರೆನ್ನುವ ವಾಸ್ತವತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ ಎಂದರು.
ಬಿಜೆಪಿ ಮುಖಂಡರ ವಿರುದ್ಧ ಬ್ಯಾನರ್ ಅಳವಡಿಸಿರುವ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸುವ ಬದಲು ಪೊಲೀಸರು ಮನಸೋ ಇಚ್ಛೆ ಥಳಿಸಿರುವುದು ದುರದೃಷ್ಟಕರ. ಹಿಂದೂ ಸಮಾಜದ ರಕ್ಷಕರು ಎಂದು ಹೇಳಿಕೆ ನೀಡುವವರೇ ಇದಕ್ಕೆ ಕುಮ್ಮಕ್ಕು ನೀಡಿರುವ ಆರೋಪ ಕೇಳಿ ಬರುತ್ತಿದೆ. ಹಿಂದೂ ಸಮಾಜದ ಮೇಲಿನ ಈ ಅನ್ಯಾಯವನ್ನು ಹಿಂದೂ ಸೇನೆ ಬಲವಾಗಿ ಖಂಡಿಸುತ್ತಿದ್ದು ನ್ಯಾಯ ಸಿಗದಿದ್ದರೆ ಹೋರಾಟಕ್ಕೂ ಮುಂದಡಿ ಇಡಲಿದೆ ಎಂದರು.
ಪುತ್ತೂರಿನಲ್ಲಿ ನಡೆದ ಸೌಮ್ಯ ಭಟ್ ಕೊಲೆ ಪ್ರಕರಣದ ಹೋರಾಟಕ್ಕಾಗಿ ಹಿಂದೂ ಸೇನೆ ಕಟ್ಟಿದ್ದೇವು. ಆದರೆ ಆಗ ಪುತ್ತೂರಿನಲ್ಲಿ ಅಧಿಕಾರದಲ್ಲಿದ್ದ ಪಕ್ಷ ಸಹಿತ ಯಾವುದೇ ರಾಜಕೀಯ ಪಕ್ಷಗಳು ನಮಗೆ ಬೆಂಬಲ ನೀಡಲಿಲ್ಲ. ಈಗ ಅಂತಹುದೇ ವಾತಾವರಣ ಮತ್ತೆ ಮೂಡಿದೆ. ಹಿಂದೂ ಸಮಾಜದಿಂದ ಲಾಭ ಪಡೆದು ಅಧಿಕಾರ ಸ್ಥಾನ ಪಡೆದವರೇ ಹಿಂದೂ ವಿರೋಧಿ ನಿಲುವು ತೋರುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹಿಂದೂ ಸಮಾಜದ ರಕ್ಷಣೆಗಾಗಿ ಗ್ರಾಮ ಮಟ್ಟದಲ್ಲಿ ನಾಯಕತ್ವ ಬೆಳೆಸುವ ಅಗತ್ಯ ಎಂದು ಸತೀಶ್ ರೈ ತಿಳಿಸಿದ್ದಾರೆ.