ಬೆಳ್ತಂಗಡಿ: ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ರಸ್ತೆಯ ಬಿ ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್ ನಲ್ಲಿ ಮುಂಜಾನೆ 5ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು 30 ಲಕ್ಷ ರೂ. ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಬೆಳಿಗ್ಗೆ 4.30 ರ ಸುಮಾರಿಗೆ ಮುಂಡಾಜೆಯ ಪತ್ರಿಕಾ ವಿತರಕ ಬಾಲಚಂದ್ರ ನಾಯಕ್ ಹಾಗೂ ಸಹಾಯಕ ಪ್ರತೀಕ್ ರೈ ಇವರು ಪತ್ರಿಕೆಗಳನ್ನು ವಿತರಿಸಲು ಆಗಮಿಸಿದ ವೇಳೆ ಸೂಪರ್ ಮಾರ್ಕೆಟ್ ಒಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಅಂಗಡಿ ಮಾಲಕರು ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದರು.
ಸ್ಥಳೀಯರಾದ ಸಚಿನ್ ಭಿಡೆ,ಜಗದೀಶ್ ನಾಯ್ಕ್ ,ಪ್ರಖ್ಯಾತ್ ಶೆಟ್ಟಿ,ದೇವಿಪ್ರಸಾದ್, ಗುರುಪ್ರಸಾದ್ ,ರಫೀಕ್, ಮನ್ಸೂರ್,ಜಿಕೆ ಮೊಯಿದ್ದೀನ್, ಅಬ್ದುಲ್ಲಾ ಎಸ್. ಮೊದಲಾದವರು ಆಗಮಿಸಿ ಬೆಂಕಿ ಇನ್ನಷ್ಟು ಆವರಿಸಿದಂತೆ ಕ್ರಮ ಕೈಗೊಂಡ ಬಳಿಕ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿತು. ಅಷ್ಟರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ.
ಸೂಪರ್ ಮಾರ್ಕೆಟ್ ಪಕ್ಕ ಅವರದೇ ಮಾಲಕತ್ವದ ದಿನಸಿ ಅಂಗಡಿ ಇದ್ದು ಸ್ಥಳೀಯರ ಸಮವಯಪ್ರಜ್ಞೆಯಿಂದ ಅದಕ್ಕೆ ಯಾವುದೇ ಹಾನಿ ಉಂಟಾಗಿಲ್ಲ.