ಮಂಗಳೂರು: ವಿವಿಧ ಜಾತಿ ಧರ್ಮ ಭಾಷೆಗಳ ಸಮ್ಮಿಶ್ರಣದಿಂದ ಭಾರತದ ಶ್ರೀಮಂತ ಪರಂಪರೆ ರೂಪುಗೊಂಡಿದೆ.ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಸತ್ಪ್ರಜೆಗಳು ಶಕ್ತಿ ಮೀರಿ ಪ್ರಯತ್ನಿಸಬೇಕಾಗಿದೆ. ಆ ಮೂಲಕ ವೈವಿಧ್ಯತೆಯಲ್ಲಿ ಏಕತೆ ಸಾರುವ ಭವ್ಯ ಭಾರತದ ಪರಂಪರೆಯನ್ನು ಇನ್ನಷ್ಟೂ ಆಳವಾಗಿ ಬೇರೂರಬೇಕು ಎಂದು ಸಂತ ಅಲೋಶಿಯಸ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ರೆ.ಫಾ.ಜೆರಾಲ್ಡ್ ಫುರ್ಟಾಡೋ ಅಭಿಪ್ರಾಯ ಪಟ್ಟರು.
ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ಕಳೆದ 3 ದಿನಗಳಿಂದ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ನ ಸಭಾಂಗಣದಲ್ಲಿ ಜರುಗಿದ ಚಿಣ್ಣರ ಕಲರವ – 2023 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಅವರು, ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೊಯ್ ಕ್ಯಾಸ್ಟಲಿನೋರವರು ಮಾತನಾಡುತ್ತಾ ಎಳೆಯ ಪ್ರಾಯದ ಮಕ್ಕಳಿಗೆ ದೇಶದ ಸಂವಿಧಾನದ ಪರಿಚಯ ಮಾಡುವ ಮೂಲಕ ಭಾರತದ ಅಂತಃಸತ್ವ ವನ್ನು ಅರಿಯಬೇಕಾಗಿದೆ.ಕೂಡಿ ಬಾಳುವ ಸಂಸ್ಕೃತಿಯನ್ನು ಮೈಗೂಡಿಸಿ,ಪ್ರೀತಿ ಹಂಚುವ ಕಾರ್ಯ ನಿರಂತರವಾಗಿ ಸಾಗಬೇಕು ಎಂದು ಹೇಳಿದರು.
ಜಿಲ್ಲಾ ಯುವಜನ ಮುಖಂಡರಾದ ಸಂತೋಷ್ ಬಜಾಲ್,ಯುವ ವಕೀಲರಾದ ಮನೋಜ್ ವಾಮಂಜೂರು ಮಾತನಾಡಿ, ಮಕ್ಕಳಲ್ಲಿ ಅದೆಷ್ಟೋ ಪ್ರತಿಭೆಗಳು ಹುದುಗಿದ್ದು,ಅವುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವಲ್ಲಿ ಇಂತಹ ಮಕ್ಕಳ ಕಾರ್ಯಾಗಾರಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಭವಿಷ್ಯದ ಹರಿಕಾರರಾದ ಇಂದಿನ ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕಾದರೆ ಪುರೋಗಾಮಿ ವಿಚಾರಗಳ ಮೂಲಕ ಮಾತ್ರ ಸಾದ್ಯ ಎಂದು ಹೇಳಿದರು.
ಚಿಣ್ಣರ ಚಾವಡಿ ಮಂಗಳೂರು ಇದರ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಕಾರ್ಯಾಗಾರದ ಮಹತ್ವವನ್ನು ಪ್ರಾಸ್ತಾವಿಕ ಮಾತುಗಳ ಮೂಲಕ ಹೇಳಿದರು.
_ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಕಾರ್ಮಿಲಿಟಾ ಡಿಸೋಜ, ಸಾಮಾಜಿಕ ಚಿಂತಕರಾದ ಫ್ಲೇವಿ ಕ್ರಾಸ್ತಾ, ಪ್ರಮೀಳಾ ದೇವಾಡಿಗ, ಕ್ವೀನಿ ಪರ್ಸಿ ಆನಂದ್, ಶಿಬಿರ ನಿರ್ದೇಶಕರಾದ ಪ್ರವೀಣ್ ವಿಸ್ಮಯರವರು ಉಪಸ್ಥಿತರಿದ್ದರು.ಸಭೆಯ ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.