ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದ್ದರೂ ಕರಾವಳಿಯಲ್ಲಿ ಪಕ್ಷದ ಸಾಧನೆ ನೀರಸವಾಗಿದೆ. ಕರಾವಳಿ ಈಗಲೂ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಫಲಿತಾಂಶಗಳು ಹೇಳಿವೆ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 13 ಸ್ಥಾನಗಳಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಅದರಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಶಾಸಕರಾಗಿ ಆಯ್ಕೆಯಾಗಿದ್ದು, ಮಂಗಳೂರು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿ ಕರಾವಳಿಯ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಜಿಜ್ಞಾಸೆ ಮತದಾರರಲ್ಲಿ ಮೂಡಿದೆ. ಆದ್ರೆ ಈ ಅವಕಾಶವನ್ನು ಪರಿಷತ್ ಸದಸ್ಯರು ಬಳಸಿಕೊಳ್ಳಲು ಮುಂದಾಗಿದ್ದು ಎಂ.ಎಲ್.ಸಿಯೂ ಆಗಿರುವ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿ.ಕೆ ಹರಿಪ್ರಸಾದ್ ಸಚಿವ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.
ಇವರ ಜೊತೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ ಹೆಸರು ಸಹ ಕೇಳಿಬಂದಿದೆ. ಅದೇ ರೀತಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕೂಡ ರೇಸ್ ನಲ್ಲಿದ್ದಾರೆ. ಇದೆಲ್ಲದರ ನಡುವೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ರಮಾನಾಥ್ ರೈ ಅವರನ್ನು ಎಂ.ಎಲ್.ಸಿ ಮಾಡಿ ಸಚಿವ ಸ್ಥಾನ ನೀಡಿ ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.