ಬಂಟ್ವಾಳ: ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳ ಪಿಎಫ್ಐ ಮತ್ತು ಐಎಸ್ಐ ಸಂಘಟನೆಗಳ ಸ್ಲೀಪರ್ ಸೆಲ್ ಆಗಿತ್ತು. ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಅದಕ್ಕೆ ಕಡಿವಾಣ ಬಿದ್ದಿದೆ ಎಂದು ಉತ್ತರ ಪ್ರದೇಶ ಮಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹೇಳಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬಿ.ಸಿ, ರೋಡ್ ಪೊಳಲಿ ದ್ವಾರದಿಂದ ಬಿ.ಸಿ ರೋಡ್ ಬಸ್ ನಿಲ್ದಾಣದವರೆಗೆ ನಡೆದ ರ್ಯಾಲಿ ಬಳಿಕ ಮಾತನಾಡಿದರು.
ಮಾರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಊರಿನಿಂದ ನಾನು ಬಂದಿದ್ದೇನೆ. ಕರ್ನಾಟಕಕ್ಕೂ ಆಯೋಧ್ಯೆಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಬಂಟ ಹನುಮನ ನಾಡು ಕರ್ನಾಟಕ. ಶ್ರೀರಾಮನ ವನವಾಸ ಸಂದರ್ಭ ಹನುಮಂತ ನೀಡಿದ ಶ್ರೇಷ್ಠ ಸಾಹಸದ ಸೇವೆ ಮನುಕುಲಕ್ಕೆ ಆದರ್ಶಪ್ರಾಯವಾಗಿದೆ. ಹನುಮನ ಸೇವಾಗುಣ, ಆದರ್ಶ, ಶ್ರೇಷ್ಠತೆ, ರಾಷ್ಟ್ರಭಕ್ತಿ, ರಾಜಭಕ್ತಿ ಹೊಂದಿರುವ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ನ ಹುನ್ನಾರ ಎಂದಿಗೂ ಕೈಗೂಡದು ಎಂದು ಯೋಗಿ ಗುಡುಗಿದರು.
ಅಲ್ಲದೆ ಹನುಮನ ಆದರ್ಶ ಪಾಲನೆ, ಸಂಘಟನೆ ಶಕ್ತಿಯೊಂದಿಗೆ ಅಭಿವೃದ್ಧಿ, ಮತ್ತು ರಾಷ್ಟ್ರಹಿತಕ್ಕೆ ಆದ್ಯತೆ ನೀಡುವ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಅವರನ್ನು ಬಹುಮತದೊಂದಿಗೆ ಆಯ್ಕೆ ಮಾಡುವ ಮೂಲಕ ನಾಡು ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಜೈ ಬಜರಂಗ್ ಬಲಿ, ಜೈ ಶ್ರೀರಾಮ್ ಘೋಷಣೆ ಹಾಕಿಸಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಕಾರ್ಯಕರ್ತರ ಜೈಕಾರ ಮುಗಿಲು ಮುಟ್ಟಿತ್ತು.
ದೇವರ ನೆನೆದ ಯೋಗಿ: ಮೊದಲಿಗೆ ಬಂಟ್ವಾಳ ವೆಂಕಟರಮಣ ಸ್ವಾಮಿ, ಪೊಳಲಿ, ಕಟೀಲು ದೇವರನ್ನು ನೆನೆದು ಮಾತು ಆರಂಭಿಸಿದರು.
ಶ್ರೀರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ ಆದಿತ್ಯನಾಥ್: ಭಾಷಣ ನಡುವೆ ಶ್ರೀರಾಮ ಮಂದಿರ ವಿಚಾರ ಪ್ರಸ್ತಾಪಿಸಿದ ಯೋಗಿ 2024ರ ಜನವರಿಯಲ್ಲಿ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ನಿಮಗೆ ಈಗಲೇ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.
ರ್ಯಾಲಿಯ ಹಾದಿ: ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲೊರ್ವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರೀಕ್ಷೆಗೂ ಮೀರಿದ ಕೇಸರಿ ಸಾಗರದ ನಡುವೆ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆಗೈದರು.
ಬಂಟ್ವಾಳಕ್ಕೆ ಸಮೀಪದ ಬಸ್ತಿಪಡ್ಪುವಿನ ವಿಶಾಲ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಯೋಗಿ ಅದಿತ್ಯನಾಥ್ ಅವರು ಕಾರಿನಲ್ಲಿ ರಸ್ತೆ ಮೂಲಕ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ತೆರಳಿ ಅಲ್ಲಿಂದ ತೆರೆದ ವಾಹನದಲ್ಲಿ ಬಸ್ ತಂಗುದಾಣದವರೆಗೆ ಸಾಗಿ ಬಂದರು. ಸಿ.ಎಂ.ಯೋಗಿಯವರೊಂದಿಗೆ ತೆರದ ವಾಹನದಲ್ಲಿ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿ,ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಜೊತೆಗಿದ್ದರು.
ಕೇಸರಿಮಯವಾದ ಬಿ.ಸಿ.ರೋಡ್ : ಹಿಂದೂ ಸಾಮ್ರಾಟ್ ಯೋಗಿಅದಿತ್ಯನಾಥ್ ಅವರ ಅಗಮನದ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ರಾ.ಹೆ.ಬಿಜೆಪಿ ಹಾಗೂ ಕೇಸರಿ ಧ್ವಜದಿಂದ ಸಂಪೂರ್ಣ ಕೇಸರಿಮಯವಾಗಿತ್ತು. ಸಂಘಟಕರ ನಿರೀಕ್ಷೆಯನ್ನು ಮೀರಿ ಜನಸಾಗರವೇ ಯೋಗಿಯನ್ನು ಕಾಣಲು ನೆರೆದಿತ್ತು.ಯೋಗಿ ಅದಿತ್ಯನಾಥ್ ಅವರ ಈ ರೋಡ್ ಶೋದಲ್ಲಿ ಪಕ್ಷದ ಮಾತ್ರವಲ್ಲ ಸಂಘಪರಿವಾರ ಸಂಘಟನೆಯ ಕಾರ್ಯಕರ್ತತರು ಭಾಗಿಯಾಗಿದ್ದರು. ಸಾರ್ವಜನಿಕರು,ಅಭಿಮಾನಿಗಳು ರಸ್ತೆಯ ಇಕ್ಕೆಲ,ಕಟ್ಟಡಗಳ ಮೇಲೆ ನಿಂತು ಯೋಗಿಯವರನ್ನು ಕಣ್ತುಂಬಿಕೊಂಡರು. ಸಂಜೆ 4 ಗಂಟೆಗೆ ಅಗಮಿಸಬೇಕಾಗಿದ್ದ ಯೋಗಿ ಅವರು ಎರಡು ತಾಸು ತಡವಾಗಿ ಅಗಮಿಸಿದ್ದರು.ಆದರೆ 4 ಗಂಟೆಯಂದಲೇ ಕ್ಷೇತ್ರದ ವಿವಿಧೆಡೆಯಿಂದ ಕಾರ್ಯಕರ್ತರ ದಂಡು ಹರಿದು ಬರುತ್ತಲೇ ಇತ್ತು.ಯುವ ಸಮೂಹವೇ ಸೇರಿದ್ದು, ಮಹಿಳೆಯರು,ಮಧ್ಯವಯಸ್ಕರು,ಮಕ್ಕಳು ಪಾದಯಾತ್ರೆಯಲ್ಲಿ ಸಾಗಿಬಂದಿದ್ದರು.
ಜೈಕಾರ,ಕುಣಿದು ಕುಪ್ಪಳಿಸಿದ ಯುವಕರು: ರೋಡ್ ಶೋದಲ್ಲಿ ನೆರದ ಯುವ ಸಮೂಹ ಕೆಸರಿ ಶಾಲನ್ನು ತಿರುಗಿಸುತ್ತಾ ಯೋಗಿ…ಯೋಗಿ.. ಎಂದು ಜೈಕಾರ ಕುಣಿದು ಕುಪ್ಪಳಿಸಿದರು. ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಈ ಸಂದರ್ಭ ಮೋದಿ ಹಾಗೂ ಬಜರಂಗಬಲಿಗೂ ಜೈಕಾರ ಕೂಗಿದರು. ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಹೆಸರು ಹೇಳುತ್ತಿದ್ದಂತೆ ಜೈಘೋಷವೇ ಮೊಳಗಿತು.ಯೋಗಿ ಅವರು ತೆರಳಿದ ಬಳಿಕ ಕೆಲ ಹೊತ್ತು ಬಸ್ ತಂಗುದಾಣದಲ್ಲಿ ಬಜರಂಗಿ ಹಾಡಿಗೆ ಯುವಕರು ಕುಣಿದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರ.ಕಾರ್ಯದರ್ಶಿಗಳಾದ ಡೊಂಬಯ ಅರಳ,ರವೀಶ್ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದಪ್ರಭು,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕೆಯುಡಬ್ಲುಎಸ್ ಸದಸ್ಯೆ ಸುಲೋಚನಾ ಭಟ್,ಕೇರಳರಾಜ್ಯ ಬಿಜೆಪಿ ಕೋಶಾಧಿಕಾರಿ ಕೃಷ್ಣದಾಸ್,ಪಾಲಕ್ಕಾಡ್ ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ನವೀನ್ ಆಯೋಧ್ಯಾ, ಪ್ರಸಾದ ಕುಮಾರ್ ರೈ ಮೊದಲಾದ ಪ್ರಮುಖರಿದ್ದರು.
ಹೂಮಳೆ: ಯೋಗಿ ಅದಿತ್ಯನಾಥ್ ಅವರು ರೋಡ್ ಶೋ ವೇಳೆ ಬಿ.ಸಿ.ರೋಡಿನ ಮೇಲ್ಸೇತುವೆ ಮೇಲಿಂದ ಕಾರ್ಯಕರ್ತರು ಹೂಮಳೆಗೈದರು. ಪ್ರಚಾರಕ,ಉ.ಪ್ರ.ಸಿ.ಎಂ. ಯೋಗಿ ಅದಿತ್ಯನಾಥ್ ಅವರಿಗೆ ವಿಶೇಷ ಭದ್ರತೆ ಇರುವ ಹಿನ್ನಲೆಯಲ್ಲಿ ಶುಕ್ರವಾರವೇ ಉ.ಪ್ರ.ದಿಂದ ಶಸ್ತ್ರಧಾರಿ ಆರೆ ಸೇನಾಪಡೆಯ ದಂಡೇ ಬಂದೋಬಸ್ತಿಗಾಗಿ ಅಗಮಿಸಿತ್ತು. ಇಡೀ ಬಿ.ಸಿ.ರೋಡಿನಲ್ಲಿ ಪೊಲೀಸ್,ಆರೆಸೇನಾಪಡೆ,ಶಸಸ್ತ್ರ ಮೀಸಲುಪಡೆ ಸರ್ಪಗಾವಲು ಹಾಕಲಾಗಿತ್ತು.
ಹೆಲಿಕಾಫ್ಟರ್ ನಲ್ಲಿ ಬಂದರು- ರಸ್ತೆ ಮಾರ್ಗದಲ್ಲಿ ತೆರಳಿದರು: ಸಂಜೆ 6.15 ರ ಹೊತ್ತಿಗೆ ಬಂಟ್ವಾಳಕ್ಕೆ ಹೆಲಿಕಾಫ್ಟರ್ ಮೂಲಕ ಆಗಮಿಸಿದ ಯೋಗಿ ಆದಿತ್ಯನಾಥ್ ಅವರು, ಬಸ್ತಿಪಡ್ಪು ಮೈದಾನದ ಬಳಿಯಿಂದ ರಸ್ತೆ ಮಾರ್ಗದಲ್ಲಿ ಕೈಕಂಬಕ್ಕೆ ಬಂದು ಅಲ್ಲಿಂದ ತೆರೆದ ವಾಹನದಲ್ಲಿ ಬಿ.ಸಿ.ರೋಡು ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು. ಸಂಜೆ 7 ರ ಹೊತ್ತಿಗೆ ಬಂಟ್ವಾಳ ರೋಡ್ ಶೋ ಮುಗಿಯುತ್ತಿದ್ದಂತೆಯೇ ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿ.ಸಿ.ರೋಡಿನಿಂದ ಹೊರಟರು. ಈ ವೇಳೆ ಕತ್ತಲಾದ ಹಿನ್ನೆಲೆ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಏರ್ಪೋರ್ಟ್ ನತ್ತ ಪಯಣ ಬೆಳೆಸಿದ್ದು, ಅಲ್ಲಿಂದ ವಿಶೇಷ ವಿಮಾನದ ಮೂಲಕ ಲಕ್ನೋಗೆ ಪ್ರಯಾಣ ಬೆಳೆಸಿದರೆಂದು ತಿಳಿದುಬಂದಿದೆ.
ಕಂಚಿನ ಪ್ರತಿಮೆ ಉಡುಗೊರೆ: ಚುನಾವಣಾ ಪ್ರಚಾರ ಸಭೆಗೆ ಆಗಮಿಸಿ, ರೋಡ್ ಶೋದಲ್ಲಿ ಭಾಗವಹಿಸಿದ ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಂಟ್ವಾಳ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಅವರು ಹನುಮಂತನ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಪುತ್ತೂರು ಬಿಜೆಪಿ ವತಿಯಿಂದ ಮಹಾಲಿಂಗೇಶ್ವರ ದೇವರ ರಜತ ಭಾವಚಿತ್ರವನ್ನು ನೀಡಲಾಯಿತು.