ಮಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮಂಗಳೂರು ಭೇಟಿ ಪಕ್ಷದ ಮುಖಂಡರಲ್ಲಿ ಹೊಸ ಹುರುಪು ತಂದಿದೆ. ಕರಾವಳಿಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲ್ಲಬೇಕು ಎಂಬ ಮುಖಂಡರ ಆಶಯಕ್ಕೆ ಯುವರಾಜ ರಾಹುಲ್ ಭೇಟಿ ಶಕ್ತಿ ತುಂಬಿದ್ದು, ಸುಳ್ಳಲ್ಲ.
ನಗರ ಹೊರವಲಯದ ಅಡ್ಯಾರ್ನಲ್ಲಿ ಗುರುವಾರ ನಡೆದ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು, ರಾಹುಲ್ ಅಭಿಮಾನಿಗಳು ಪಾಲ್ಗೊಂಡಿದ್ದರು.
ಜನಸಾಗರ: ಸಮಾವೇಶಕ್ಕೆ ಮಧ್ಯಾಹ್ನವೇ ಪ್ರವಾಹದೋಪಾದಿಯಲ್ಲಿ ಜನರು ಆಗಮಿಸಿದ್ದರು. ಸಂಜೆ ವರೆಗೂ ಜನರು ಸಮಾವೇಶ ತಾಣದತ್ತ ಬರುತ್ತಲೇ ಇದ್ದರು. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಹರೇಕಳ ಕಿಂಡಿ ಅಣೆಕಟ್ಟು ಸೇತುವೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ಮೈದಾನದ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳಾದ ರಕ್ಷಿತ್ ಶಿವರಾಮ್, ಯು.ಟಿ, ಖಾದರ್, ಅವರನ್ನು ಕಾರ್ಯಕರ್ತರು ಹೊತ್ತು ಸಭಾಂಗಣದತ್ತ ಸಾಗಿದರು. ಕಾಂಗ್ರೆಸ್ ಚುನಾವಣಾ ಪ್ರಚಾರ ಜಾಹೀರಾತು, ಹಾಡುಗಳು ಕಾರ್ಯಕರ್ತ ಹುಮ್ಮಸ್ಸು ಇಮ್ಮಡಿಗೊಳಿಸಿತು.
ಹೆಲಿಪ್ಯಾಡ್: ಸಹ್ಯಾದ್ರಿ ಕಾಲೇಜಿನ ಮುಂಭಾಗ ಸಮಾವೇಶ ನಡೆದರೆ, ಹಿಂಭಾಗದ ನದಿ ಕಿನಾರೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಅಲ್ಲಿಂದ ನೇರವಾಗಿ ಸಮಾವೇಶ ಸ್ಥಳಕ್ಕೆ ರಾಹುಲ್ ಆಗಮಿಸಿದರು.
ರಾಹುಲ್ ಕಾಣಲು ಕಾತರ: ರಾಹುಲ್ ಅವರಿದ್ದ ಹೆಲಿಕಾಪ್ಟರ್ ಆಕಾಶದಲ್ಲಿ ಕಾಣುತ್ತಿದ್ದಂತೆ ಸಮಾವೇಶ ಸ್ಥಳದಲ್ಲಿ ಜನರ ಘೋಷಣೆ ಮುಗಿಲುಮುಟ್ಟಿತ್ತು.
ಆಜಾನ್ ವೇಳೆ ಭಾಷಣ ನಿಲ್ಲಿಸಿದ ರಾಹುಲ್: ಭಾಷಣದ ವೇಳೆ ಸಮೀಪದ ಮಸೀದಿಯಿಂದ ಆಜಾನ್ ಕೇಳಿಬಂತು. ಈ ವೇಳೆ ರಾಹುಲ್ ಭಾಷಣ ನಿಲ್ಲಿಸುವ ಮೂಲಕ ಗೌರವ ಸೂಚಿಸಿದರು. ರಾಹುಲ್ ಈ ಬಗ್ಗೆ ಮೈಕ್ನಲ್ಲಿ ಹೇಳುತ್ತಿದ್ದಂತೆ ಭಾರಿ ಕರತಾಡನ ಕೇಳಿಬಂತು.