ಬೆಂಗಳೂರು: ಹಿಜಾಬ್ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ ಬಳಿಕ ತನಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ, ಎಂದು ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಹೇಳಿಕೆ ನೀಡಿದ ಬೆನ್ನಲ್ಲೇ ಅವರಿಗೆ ಸಶಸ್ತ್ರ ಸಿಬ್ಬಂದಿಯನ್ನು ಭದ್ರತೆಗೆ ಒದಗಿಸಲಾಗಿದೆ.
ಕರ್ನಾಟಕದಲ್ಲಿ ಹಿಜಾಬ್ ಸಮಸ್ಯೆ ಹುಟ್ಟಿಕೊಂಡ ಉಡುಪಿಯ ಮಹಿಳಾ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಭಟ್ ಅವರು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮಗೆ ಬಂದಿರುವ ಕರೆಗಳಲ್ಲಿ ಹೆಚ್ಚಿನವು ವಿದೇಶಗಳಿಂದ ಇಂಟರ್ನೆಟ್ ಕರೆಗಳಾಗಿವೆ. ಕರೆ ಮಾಡಿದವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಅದು ನನಗೆ ಹೊಸದಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ರಘುಪತಿ ಭಟ್ ಅವರಿಗೆ ನೀಡಲಾಗುವ ಪ್ರಸ್ತುತ ಮಟ್ಟದ ಭದ್ರತೆಯನ್ನು ಸಾಮಾನ್ಯವಾಗಿ ಮಂತ್ರಿಗಳು ಅಥವಾ ಇತರ ರಾಜಕೀಯ ವಿಐಪಿಗಳಿಗೆ ನೀಡಲಾಗುತ್ತದೆ.
ಮುಂದಿನ ತನಿಖೆಯ ಆಧಾರದ ಮೇಲೆ ಶಾಸಕರ ನಿವಾಸಕ್ಕೆ ಶಸ್ತ್ರಸಜ್ಜಿತ ಕಾವಲುಗಾರರ ತಂಡವನ್ನು ನಿಯೋಜಿಸಿ 24 ಗಂಟೆಗಳ ಕಾಲ ಸಶಸ್ತ್ರ ರಕ್ಷಣೆ ನೀಡಬೇಕೇ ಎಂದು ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಹಿಜಾಬ್ ವಿಚಾರದಲ್ಲಿ ಹೆಚ್ಚು ಮಾತನಾಡಿದರೆ ಅವರನ್ನು ಟಾರ್ಗೆಟ್ ಮಾಡಲಾಗುವುದು ಎಂದು ಎಚ್ಚರಿಸುತ್ತಲೇ ಬಂದಿದ್ದಾರೆ. ತನಗೆ ಸ್ಥಳೀಯ ಸಂಖ್ಯೆಗಳಿಂದ ಹಲವಾರು ಕರೆಗಳು ಬಂದಿವೆ ಮತ್ತು ಬೆಳವಣಿಗೆಯ ಬಗ್ಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿಳಿಸಿದ್ದೇನೆ ಎಂದು ಭಟ್ ಹೇಳಿದರು.