ಉಡುಪಿ: ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ವಾಸವಾಗಿರುವ ಭೋವಿ ಸಮುದಾಯಕ್ಕೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪ್ರಮಾಣ ಪತ್ರವನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೂಡಲೇ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲು ಪುನರಾರಂಭಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ, ಭೋವಿ ಜನಾಂಗದಿಂದ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಕರ್ನಾಟಕ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ರತ್ನಾಕರ ಭೋವಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೋವಿ ಜನಾಂಗದ ಜನಸಂಖ್ಯೆ 6 ಸಾವಿರ ಇದೆ. ನಾವು ಬೇರೆ ರಾಜ್ಯಗಳಿಂದ ವಲಸೆ ಬಂದವರಲ್ಲ, ಇಲ್ಲಿಯೇ ಹುಟ್ಟಿ ಬೆಳೆದಿರುವ ಸಮುದಾಯ. 1978ರಿಂದ 2018ರವರೆಗೆ ಜಾತಿ ಪ್ರಮಾಣಪತ್ರವನ್ನು ನೀಡಲಾಗಿದ್ದು, 2018ರಿಂದ ಸ್ಥಗಿತ ಮಾಡಲಾಗಿದೆ ಎಂದರು.
ತಹಶೀಲ್ದಾರ್ ಹಾಗೂ ಡಿಸಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಶಾಸಕರು, ಸಚಿವರಿಂದ ಹಿಡಿದೂ ಮುಖ್ಯಮಂತ್ರಿವರೆಗೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಭೋವಿ, ಸಂಚಾಲಕ ಸುಂದರ್ ನಾರಾಯಣ್, ಗ್ರಾಪಂ ಸದಸ್ಯ ಸೂಲ್ಯ ಭೋವಿ, ಪ್ರಮುಖರಾದ ಮಹೇಂದ್ರ ಭೋವಿ, ಉದಯ ಭೋವಿ ಇದ್ದರು.