ಉಡುಪಿ: ಉಡುಪಿ ಜನತೆಯ ಬಹು ಬೇಡಿಕೆಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗ ಅಥವಾ 3000 ಚದರ ಅಡಿ ವರೆಗೆ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆ ಮಾಡಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್ ಅವರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಸೆಂಟ್ಸ್ ವರೆಗಿನ ಕೃಷಿ ಜಮೀನಿನನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿದೆ. ಈ ಆದೇಶದಲ್ಲಿ 5 ಸೆಂಟ್ಸ್ ರಿಂದ 7 ಸೆಂಟ್ಸ್ ವರೆಗೆ ಶೇಕಡಾ 45 ಹಾಗೂ 7 ಸೆಂಟ್ಸ್ ರಿಂದ 10 ಸೆಂಟ್ಸ್ ವರೆಗೆ ಶೇಕಡಾ 35 ರ ಮಿತಿಯಲ್ಲಿ ಮತ್ತು 5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳಿಗೆ ಯಾವುದೇ ಮಿತಿ ಇಲ್ಲ ಎಂಬ ಅಂಶವನ್ನು ಅಳವಡಿಸಲಾಗಿದೆ ಎಂದರು.
ಈ ಆದೇಶದಿಂದಾಗಿ ಇನ್ಮುಂದೆ 10 ಸೆಂಟ್ಸ್ ವರೆಗಿನ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆ ಮಾಡಲು ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿಯೇ ವಲಯ ಬದಲಾವಣೆ ಮಾಡಬಹುದಾಗಿದೆ. ಪ್ರಸ್ತುತ ಈ ವಿಷಯದ ಸಂಬಂಧ ಸುಮಾರು 3 ಸಾವಿರಕ್ಕೂ ಅಧಿಕ ಅರ್ಜಿಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದು, ಅರ್ಜಿದಾರರಿಗೆ ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ್ಯ ಮನೋಹರ್ ಕಲ್ಮಾಡಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್, ಪ್ರಾಧಿಕಾರದ ಆಯುಕ್ತ ಗುರುಪ್ರಸಾದ್ ಉಪಸ್ಥಿತರಿದ್ದರು.