ಉಡುಪಿ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆಯ ವಿರುದ್ಧ ರೋಗಿಗಳು ಇಂದು ದಿಢೀರ್ ಪ್ರತಿಭಟನೆ ಮಾಡಿದರು.
ಡಯಾಲೀಸಿಸ್ ಕೇಂದ್ರವನ್ನು ಗುತ್ತಿಗೆ ಪಡೆದಿರುವ ಎಸ್ಕಗ್ ಸಂಜೀವಿನಿ ಸಂಸ್ಥೆಯ ನಿರ್ವಹಣೆ ಕಳಪೆಯಾಗಿದ್ದು, ವ್ಯವಸ್ಥಿತವಾಗಿ ಯಾವುದೂ ನಡೆಯುತ್ತಿಲ್ಲ. ಈ ಸಂಸ್ಥೆಗೆ ಜಿಲ್ಲಾಸ್ಪತ್ರೆಯವರು ಕೇಂದ್ರವನ್ನು ಬಿಟ್ಟು ಕೊಡುವಾಗ ಒಟ್ಟು 14 ಡಯಾಲಿಸಿಸ್ ಯಂತ್ರಗಳಿದ್ದವು. ಅವುಗಳ ಪೈಕಿ ಪ್ರಸ್ತುತ ಏಳು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ಹಾಳಾಗಿದ್ದು, ಅದನ್ನು ದುರಸ್ತಿ ಕೂಡ ಮಾಡಿಲ್ಲ. ಕೇಂದ್ರದ ಅವ್ಯವಸ್ಥೆಯಿಂದ ಕಳೆದ ಒಂದು ವರ್ಷಗಳಲ್ಲಿ 30 ರೋಗಿಗಳು ಮೃತಪಟ್ಟಿದ್ದಾರೆ ಎಂದು ಧರಣಿನಿರತರು ಗಂಭೀರ ಆರೋಪ ಮಾಡಿದರು.
ಈಗ ಈ ಕೇಂದ್ರದಲ್ಲಿ ಒಟ್ಟು 60 ರೋಗಿಗಳು ಡಯಾಲಿಸಿಸ್ ಮಾಡುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರೋಗಿಗಳು ಜಿಲ್ಲಾ ಸರ್ಜನ್, ಜಿಲ್ಲಾಧಿಕಾರಿ, ಶಾಸಕರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಯಾಲಿಸಿಸ್ಗೆ ಸಂಬಂಧಿಸಿ ತುಂಬಾ ಸಮಸ್ಯೆ ಇದೆ. ಸರಿಯಾಗಿ ಕ್ಲೀನ್ ಆಗುತ್ತಿಲ್ಲ. ಡಯಾಲಿಸಿಸ್ ಮಾಡಿದ ನಂತ ಚಳಿ, ವಾಂತಿ ಆಗುತ್ತದೆ. ನಾವು ಪ್ರಶ್ನೆ ಮಾಡಿದರೆ ನಮಗೆ ಉಡಾಫೆಯಿಂದ ಮಾತನಾಡುತ್ತಾರೆ. ಸಿಬ್ಬಂದಿಗಳಿಲ್ಲದೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಆಗುತ್ತಿಲ್ಲ. ಅವರು ಏನು ಮಾಡಿದರೂ ನಾವು ಕೇಳಬೇಕು. ಯಾಕೆಂದರೆ ನಾವು ಉಚಿತವಾಗಿ ಮಾಡುವವರು ಎಂಬ ನಿರ್ಲಕ್ಷತನ ಅವರಲ್ಲಿದೆ. ಆದುದರಿಂದ ಸರಕಾರ ಕೂಡಲೇ ಹೊಸ ಯಂತ್ರ ಅಳವಡಿಸಿ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಧರಣಿನಿರತರು ಆಗ್ರಹಿಸಿದರು.