ಉಡುಪಿ: ಗ್ಯಾರೆಂಟಿ ಕಾರ್ಡ್ಗಳ ಬಗ್ಗೆ ಉತ್ತರ ಕೊಡಬೇಕಾಗಿರೋದು ಸರಕಾರದ ಜವಾಬ್ದಾರಿ. ಅನುಷ್ಠಾನ ಮಾಡಲು ಸಾಧ್ಯ ಅಸಾಧ್ಯ ಎಂಬುದನ್ನು ಜನತೆ ಮುಂದೆ ಹೇಳಬೇಕು. ಪ್ರಧಾನಿ ಮೋದಿ 15 ಲಕ್ಷ ರೂ. ಕೊಡುತ್ತಾರೆ ಎಂದು ಎಲ್ಲೂ ಆಶ್ವಾಸನೆ ನೀಡಿಲ್ಲ. ವಿದೇಶದ ಕಪ್ಪು ಹಣ ಬಂದರೆ ಒಬ್ಬರಿಗೆ 15 ಲಕ್ಷ ಕೊಡಬಹುದು ಎಂದು ಹೇಳಿದ್ದರು.
ಆದರೆ, ಜನರ ಖಾತೆಗೆ ಹಣ ಹಾಕುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿಲ್ಲ. ಹಾಗಾಗಿ ಬಿಜೆಪಿಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಖಂಡನೀಯ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ’ ಎಂದು ಹೇಳಿದ ಆಶ್ವಾಸನೆ ಈಡೇರಿಸಿ. ಕೇಂದ್ರ 5 ಕೆಜಿಅಕ್ಕಿಯ ಜೊತೆ ಸಾಗಾಣಿಕ ವೆಚ್ಚವನ್ನು ಕೊಡುತ್ತಿದೆ. ಕೇಂದ್ರ 5ಕೆ.ಜಿ ಕೊಡುತ್ತಿದೆ ನಾವು 5 ಕೆಜಿ ಸೇರಿಸಿ ಕೊಡುತ್ತೇನೆ ಎಂದು ಹೇಳಬೇಕಿತ್ತು. ಕೊಟ್ಟ ಮಾತಿನಿಂದ ತಪ್ಪಿಸಿಕೊಂಡರೆ ನಿಮಗೆ ಶೋಭೆ ಬರಲ್ಲ. ಜೂನ್ ಒಂದರಿಂದ ಬಿಲ್ ಕಟ್ಟುವುದು ಬೇಡ ಎಂದಿದ್ದೀರಿ ಆ ಮಾತನ್ನು ಉಳಿಸಿಕೊಳ್ಳಿ. ಆಳುವ ಸರಕಾರ ಮಾತು ತಪ್ಪಿದರೆ ವಿಪಕ್ಷ ಎಚ್ಚರಿಸುತ್ತದೆ ಎಂದರು.