ಕಾರವಾರ: ಸೆಪ್ಟೆಂಬರ್ ನಲ್ಲಿ ಭಾರತ ಆಯೋಜಿಸಲಿರುವ ಜಿ-20 ಶೃಂಗಸಭೆಯ ಅಂಗವಾಗಿ ದೇಶದ ವಿವಿಧೆಡೆ ವಿವಿಧ ಚಟುವಟಿಕೆಗಳನ್ನ ಆಯೋಜಿಸಲಾಗುತ್ತಿದ್ದು, ಅದರ ಭಾಗವಾಗಿ ಕರ್ನಾಟಕದ ಕರಾವಳಿಯಲ್ಲಿಂದು ಕಡಲತೀರ ಸ್ವಚ್ಛತೆಯ ಬೃಹತ್ ಅಭಿಯಾನ ನಡೆಸಲಾಯಿತು.
ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವುದರ ಹಿನ್ನಲೆ ದೇಶದಾದ್ಯಂತ ಏಕಕಾಲಕ್ಕೆ ಬೃಹತ್ ಕಡಲತೀರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲೂ ಸ್ವಚ್ಛತೆ ಕೈಗೊಳ್ಳಲಾಯಿತು. ಅರಣ್ಯ ಇಲಾಖೆ, ನೆಹರೂ ಯುವ ಕೇಂದ್ರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿದ್ದು, ಈ ಮೂಲಕ ಕಡಲಪರಿಸರವನ್ನು ಸ್ವಚ್ಛವಾಗಿಡುವ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
ಕಡಲಪರಿಸರದ ಮಾಲಿನ್ಯದಿಂದ ಕಡಲಜೀವಿಗಳಿಗೆ ಮಾತ್ರವಲ್ಲದೇ ಮಾನವನ ಜೀವನದ ಮೇಲೂ ಪರಿಣಾಮ ಬೀರುವ ಹಿನ್ನಲೆ ಸ್ವಚ್ಛ ಕಡಲಿನ ಗುರಿಯೊಂದಿಗೆ ಕಡಲತೀರದ ಸ್ವಚ್ಛತೆಯನ್ನ ಹಮ್ಮಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸ್ವಚ್ಛತಾ ಅಭಿಯಾನದಲ್ಲಿ ಕೋಸ್ಟ್ಗಾರ್ಡ್, ಎನ್ಸಿಸಿ, ಎನ್ಎಸ್ಎಸ್, ಕೋಸ್ಟಲ್ ಎಂಡ್ ಮರೈನ್ ಇಕೋ ಸಿಸ್ಟಮ್ ಕಾರವಾರ ಘಟಕ, ಕಡಲಉತ್ಸವ ತಂಡ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದ್ದರು.
ಮೂರು ತಂಡಗಳನ್ನಾಗಿ ವಿಭಾಗಿಸಿಕೊಂಡು ಸುಮಾರು 2 ಕಿಮೀನಷ್ಟು ವಿಶಾಲವಾಗಿರುವ ಟ್ಯಾಗೋರ್ ಕಡಲತೀರದಲ್ಲಿ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯವನ್ನ ಕೈಗೊಳ್ಳಲಾಯಿತು. ಈ ವೇಳೆ ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ಬಾಟಲ್ಗಳು ಸೇರಿ ಸುಮಾರು ಹತ್ತು ಚೀಲಗಳಷ್ಟು ತ್ಯಾಜ್ಯವನ್ನ ಸಂಗ್ರಹಿಸಲಾಯಿತು.
ಕಡಲತೀರ ವೀಕ್ಷಣೆಗೆ ಬರುವಂತಹ ಪ್ರವಾಸಿಗರು ಹಾಗೂ ಸಾರ್ವಜನಿಕರು ಕಸವನ್ನ ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗಳನ್ನ ಬಳಕೆ ಮಾಡಿ ಸ್ವಚ್ಚತೆ ಕಾಯ್ದುಕೊಳ್ಳುವಂತೆ ಅಭಿಯಾನದಲ್ಲಿ ಪಾಲ್ಗೊಂಡ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಈಶ್ವರ ಕಾಂದೊ, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ.ಸಿ., ಹಾಗೂ ಇನ್ನಿತರರು ಇದ್ದರು.