ಕುಂದಾಪುರ: ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜೆಕಟ್ಟೆ ವಿಶ್ವನಾಥ ಶಾನುಭೋಗ್ ಅವರ ಮನೆ ಮೇಲೆ ಮೂರು ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು 1.50 ಲಕ್ಷ.ಕ್ಕೂ ಅಧಿಕ ಹಣ ನಷ್ಟ ಉಂಟಾದ ಘಟನೆ ಭಾನುವಾರ ನಡೆದಿದೆ.
ಮರವಂತೆ ಭಾಗದಲ್ಲಿ ಭಾನುವಾರ ರಾತ್ರಿ ಕಾಣಿಸಿಕೊಂಡಿದ್ದ ಭಾರಿ ಮಳೆ ಗಾಳಿಗೆ ತೆಂಗಿನ ಮರ ವಿಶ್ವನಾಥ ಶಾನುಭೋಗ್ ಮನೆ ಮೇಲೆ ಉರುಳಿ ಬಿದ್ದು ಮನೆಗೆ ಹಾನಿ ಆಗಿದ್ದು ಮಾತ್ರವಲ್ಲದೆ ಜಗುಲಿಯಲ್ಲಿ ಮಲಗಿದ್ದ ಅವರ ತಲೆ ಮೇಲೆ ಹೆಂಚಿನ ತುಂಡುಗಳು ಉರುಳಿ ಬಿದ್ದ ಪರಿಣಾಮ ಗಾಯವಾಗಿದೆ. ಮರವಂತೆ ಅನಂತ ಶೆಣೈ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾದ ಘಟನೆ ಕೂಡ ನಡೆದಿದೆ. ಘಟನೆಯ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.