ಕುಂದಾಪುರ: ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಕೆಳಹೊರ್ಣಿ ಎಸ್.ಸಿ ಕಾಲೋನಿ ಮತ್ತು ಹರ್ಕೂರು ಹೇರಿಗದ್ದೆ ಎಸ್.ಸಿ ಕಾಲೋನಿ ಭಾಗದದಲ್ಲಿ ಬಾವಿ ನೀರು ತಳ ಹಿಡಿದಿದ್ದು ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ.
ಹರ್ಕೂರು ಕೆಳಹೊರ್ಣಿ ಎಸ್.ಸಿ ಕಾಲೋನಿಯಲ್ಲಿ ನಾಲ್ಕು ಕುಟುಂಬಗಳು ಮತ್ತು ಕಟ್ಟಿನಮಕ್ಕಿ ಹೇರಿಗದ್ದೆ ಎಸ್.ಸಿ ಕಾಲೋನಿಯಲ್ಲಿ ಐದು ಕುಟುಂಬಗಳು ವಾಸಮಾಡುತ್ತಿದ್ದಾರೆ.ಈ ಭಾಗದ ಪರಿಸರದಲ್ಲಿದ್ದ ಸರಕಾರಿ ಬಾವಿ ನೀರು ತಳಹಿಡಿದಿದೆ,ಕೊಳವೆ ಬಾವಿ ನೀರು ಕುಡಿಯಲು ಯೊಗ್ಯವಾಗಿಲ್ಲ. ಸರಕಾರಿ ಬಾವಿ ನೀರಿನ ಆಶ್ರಯದಲ್ಲೇ ಬದುಕನ್ನು ಕಟ್ಟಿಕೊಂಡಿರುವ ಎಸ್.ಸಿ ಕಾಲೋನಿ ಭಾಗದ ಜನರಿಗೆ ಬಾವಿ ನೀರು ಬರಿದಾಗಿದ್ದರಿಂದ ಕಳೆದ 15 ದಿನಗಳಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ.ಹನಿ ನೀರಿಗೂ ಪರಿತಪಿಸುವಂತೆ ಆಗಿದ್ದು,ಕುಡಿಯಲು ನೀರನ್ನು ಒದಗಿಸಿ ಕೊಡುವಂತೆ ಪಂಚಾಯತ್ ಸದಸ್ಯರ ಬಳಿ ಹಲವಾರು ಬಾರಿ ಹೇಳಿದ್ದರೂ ಯಾವುದೇ ರೀತಿಯ ಪ್ರಯೋಜನೆ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.