ಕುಂದಾಪುರ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು,ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿಯನ್ನು ಮಾಡಿದ್ದರು,ಶಾಸಕರ ಮನವಿಗೆ ಸ್ಪಂದಿಸಿದ ಮಂಗಳೂರು ವಿ.ವಿ. ಶುಲ್ಕ ಇಳಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಒಬ್ಬ ಪದವೀಧರ ವಿದ್ಯಾರ್ಥಿ ತನ್ನ 6 ಸೆಮಿಸ್ಟರ್ಗಳ ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ ಇತರ ಶುಲ್ಕ ಸೇರಿ ಒಟ್ಟು 10,800 ರೂ. ಪಾವತಿಸಬೇಕಾಗುತ್ತದೆ.ಇದು ಮಂಗಳೂರು ವಿ.ವಿ.ಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಹೊರೆಯಾಗಿತ್ತು. ತುಮಕೂರು ರಾಜ್ಯದಲ್ಲಿಯೇ 6 ವಿಷಯಗಳ ಅಂಕಪಟ್ಟಿಗೆ ಕೇವಲ 501 ರೂ. ಶುಲ್ಕವನ್ನಷ್ಟೇ ತೆಗೆದುಕೊಳ್ಳುತ್ತಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಕಪಟ್ಟಿ ಶುಲ್ಕ ಪರಿಷ್ಕರಣೆ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು,ಕರಾವಳಿ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಆಗ್ರಹಿಸಿದ್ದರು.
ಶಾಸಕ ಗುರುರಾಜ್ ಗಂಟಿಹೊಳೆ ಅವರ ಮನವಿಗೆ ಸ್ಪಂದಿಸಿದ ಮಂಗಳೂರು ವಿಶ್ವವಿದ್ಯಾಲಯ ಪ್ರತಿ ವಿಷಯದ ಅಂಕಪಟ್ಟಿಯ ಮೇಲೆ ರೂ.500 ಕಡಿಮೆ ಮಾಡಿದೆ.ಶುಲ್ಕ ಇಳಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಶಾಸಕರಾಗಿ ಹದಿನೈದು ದಿನದಲ್ಲೆ ಸಾವಿರಾರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.