ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜದಂಡವನ್ನು ಸಂಸತ್ತಿನಲ್ಲಿ ಇಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಮುಂದಿನ ಬಾರಿ ಪ್ರಧಾನಿ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲು ರಾಜದಂಡವನ್ನು ಸ್ವೀಕರಿಸಿ, ಬಳಿಕ ಪ್ರಮಾಣವಚನ ಸ್ವೀಕರಿಸಬೇಕು. ಇದರಿಂದ ರಾಜದಂಡದ ಗೌರವ ಹೆಚ್ಚುತ್ತದೆ. ಹಿಂದಿನ ಸಂಪ್ರದಾಯಗಳು ಮರುಕಳಿಸುತ್ತವೆ ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರಾಜರ ಪಟ್ಟಾಭಿಷೇಕ ನಡೆಯುವಾಗ ರಾಜದಂಡ ನೀಡುವ ಸಂಪ್ರದಾಯ ಇತ್ತು. ಈಗ ಕುಟುಂಬ, ಗ್ರಾಮಕ್ಕೆ ಸಂಪ್ರದಾಯ ಸೀಮಿತಗೊಂಡಿದೆ. ಅರ್ಧದಲ್ಲಿ ನಿಂತಿದ್ದ ನಮ್ಮ ಮನೆತನದ ಸಂಪ್ರದಾಯವನ್ನು ದೈವಗಳ ಬೇಡಿಕೆ, ಕುಟುಂಬದ ಒಪ್ಪಿಗೆಯಂತೆ ನಾನು ರಾಜದಂಡ ಸ್ವೀಕರಿಸಿದ್ದೇನೆ. ಹಿಂದೆ ರಾಜರು ನ್ಯಾಯ ತೀರ್ಮಾನ ಮಾಡುವಾಗ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜದಂಡ ಹಿಡಿಯುತ್ತಿದ್ದರು. ಆದರೆ ಈಗ ಅದು ವಿಜಯದಶಮಿ, ದೈವದ ಬಲಿ ನಡೆಯುವ ಸಂದರ್ಭದಲ್ಲಿ ಮಾತ್ರ ಹಿಡಿಯಲಾಗುತ್ತದೆ ಎಂದರು.