ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಪ್ರಸಾದ್ ರಾಜ್ ಕಾಂಚನ್ ಮತದಾರರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇತ್ತೀಚಿಗಷ್ಟೇ ಮುಗಿದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ, ಅಭೂತಪೂರ್ವವಾಗಿ ಬೆಂಬಲಿಸಿದ ಉಡುಪಿ ವಿಧಾನ ಸಭಾ ಕ್ಷೇತ್ರದ ಪ್ರತಿಯೊಬ್ಬ ಮತದಾರ ಬಂಧುಗಳಿಗೆ ಹೃದಯಸ್ಪರ್ಶಿ ಅಭಿನಂದನೆಗಳು ಎಂದು ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನನ್ನು ಉಡುಪಿ ಕ್ಷೇತ್ರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಅಲ್ಪಾವಧಿಯಲ್ಲೇ ನನ್ನನ್ನು ಕ್ಷೇತ್ರದ ಪ್ರತಿ ಮನೆ ಮನ ತಲುಪಿಸುವಲ್ಲಿ ನನ್ನ ಜೊತೆಯಲ್ಲಿ ನೀವೆಲ್ಲರೂ ಪರಸ್ಪರ ಕೈ ಜೋಡಿಸಿರುವುದ್ದಕ್ಕಾಗಿ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಸ್ಪರ್ಧೆ ಎಂದಾಗ ಸೋಲು ಗೆಲವು ಸಹಜ. ಅದರೆ ಇಲ್ಲಿ ನನ್ನ ಸೋಲನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ನಿರೀಕ್ಷೆಗೂ ಮೀರಿದ ಜನ ಬೆಂಬಲ, ಸಹಕಾರ, ಸ್ಪಂದಿಸಿದ ರೀತಿ ನೋಡಿದಾಗ ನಿಜಕ್ಕೂ ನಾನು ಜಯಶಾಲಿ ಆಗಿದ್ದೇನೆ ಎಂದು ಭಾವಿಸಿಕೊಂಡಿದ್ದೇನೆ ಎಂದು ಹೇಳಿದರು.
ಅಧಿಕೃತ ಅಲ್ಲದಿದ್ದರೂ ನನ್ನನ್ನು ನಿಮ್ಮೆಲ್ಲರ ಒಬ್ಬ ಸಾಮಾನ್ಯ ಪ್ರತಿನಿಧಿಯಾಗಿ ಪರಿಗಣಿಸಲು ಈ ಮೂಲಕ ವಿನಂತಿಸುತ್ತೇನೆ, ನೀವು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ, ಇದನ್ನು ಹೃದಯಸ್ಪರ್ಶಿಯಾಗಿ ನೀವೆಲ್ಲರೂ ಸ್ವೀಕರಿಸಿದ್ದೀರಿ ಎಂದು ಭಾವಿಸಿ ಕೊಳ್ಳುತ್ತಿದ್ದೇನೆ.
ಚುನಾವಣಾ ಹೊತ್ತಿನಲ್ಲಿ ನಾನು ವೈಯಕ್ತಿಕವಾಗಿ ನೀಡಿದ ಮತ್ತು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ, ಭರವಸೆ, ಆಶ್ವಾಸನೆ, ಮತ್ತು ಕೊಟ್ಟ ಮಾತುಗಳನ್ನು ಶಿರಸಾ ಈಡೇರಿಸುವಲ್ಲಿ ನನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ನಾನು ಶಾಸಕನಲ್ಲದಿದ್ದರೂ, ಆ ಹುದ್ದೆಗಿಂತಲೂ ಮಿಗಿಲಾದ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಎಂದರು.
ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿಯನ್ನು ನೀವೆಲ್ಲಾ ನೀಡಿದ್ದೀರಿ. ಒಬ್ಬ ಯುವ ನಾಯಕನಾಗಿ ಕ್ಷೇತ್ರದ ಪಕ್ಷದ ಕಾರ್ಯಸೂಚಿಯನ್ನು ಸಮರ್ಥವಾಗಿ ನಿಭಾಸುತ್ತೇನೆಂದು ಈ ಮೂಲಕ ವಚನ ನೀಡುತ್ತೇನೆ. ಮುಂದಿನ ದಿನಗಳಲ್ಲಿ ನೀವೆಲ್ಲರೂ ನನ್ನ ಜೊತೆಯಾಗಿ ಸಹಕರಿಸುತ್ತೀರಿ ಎಂಬ ತುಂಬು ಭರವಸೆಯಲ್ಲಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.