ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದೀಗ ಸರಕಾರಿ ಶಾಲೆಗಳಲ್ಲೂ ತೀವ್ರ ನೀರಿನ ಅಭಾವ ಉಂಟಾಗಿದೆ.
ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಗೂ ನೀರಿನ ಸಮಸ್ಯೆ ಕಾಡಿದ್ದು, ವಿದ್ಯಾರ್ಥಿಗಳು ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಈ ಶಾಲೆಯೂ ಬಾವಿಯ ನೀರನ್ನೇ ಬಹುತೇಕವಾಗಿ ಅವಲಂಬಿಸಿಕೊಂಡಿತ್ತು. ಆದರೆ, ಮುಂಗಾರುಪೂರ್ವ ಮಳೆಯ ಅಭಾವದಿಂದಾಗಿ ಬಾವಿ ನೀರು ಬತ್ತಿದೆ. ಇದರಿಂದ ಮಕ್ಕಳ ಶೌಚ ,ಕುಡಿಯಲು ಶುದ್ಧ ನೀರು, ಊಟ ತಿಂಡಿ ಮಾಡಿ ಶುಚಿಗೊಳಿಸುವುದಕ್ಕೆ ಸಾಕಷ್ಟು ನೀರಿನ ಅಗತ್ಯ ಇದೆ. ಆದರೆ ಬೇಸಿಗೆ ಮಳೆ ಬಾರದ ಹಿನ್ನೆಲೆಯಲ್ಲಿ ನೀರಿನ ಕೊರತೆ ಶಾಲಾ ವಿದ್ಯಾರ್ಥಿಗಳಿಗೂ ತಟ್ಟಿದೆ.
ನಗರಸಭೆಯ ಅರ್ದಂಬರ್ಧ ಯೋಜನೆಗಳು ,ಕುಡಿಯುವ ನೀರಿನ ಯೋಜನೆಯಲ್ಲಿನ ವಿಳಂಬವೇ ಈ ಸಮಸ್ಯೆಗೆ ಕಾರಣವಾಗಿದೆ. ಕಳೆದ ವಾರ ಜಿಲ್ಲಾಸ್ಪತ್ರೆಯಲ್ಲೂ ನೀರಿನ ಕೊರತೆ ಉಂಟಾಗಿ ರೋಗಿಗಳಿಗೆ ಸಮಸ್ಯೆ ಉಂಟಾಗಿತ್ತು.ಈಗ ಶಾಲೆಗೂ ಈ ಸಮಸ್ಯೆ ತಟ್ಟಿದ್ದು ದುರದೃಷ್ಟಕರ. ಸ್ಥಳೀಯಾಡಳಿತ ಮತ್ತು ಶಾಸಕರು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಹಳೆವಿದ್ಯಾರ್ಥಿ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.