ಉಡುಪಿ: ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ನೀರಿನ ಅಭಾವ ಜಿಲ್ಲಾಸ್ಪತ್ರೆಯ ರೋಗಿಗಳಿಗೂ ತಟ್ಟಿದೆ.
ಉಡುಪಿಗೆ ನೀರುಣಿಸುತ್ತಿರುವ ಸ್ವರ್ಣಾ ನದಿ ನೀರು ಬಹುತೇಕ ತಳಮಟ್ಟ ತಲುಪಿದೆ. ಹೀಗಾಗಿ, ನಗರಸಭೆ ನೀರು ಅವಲಂಬಿಸಿದ ಜನರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ನಗರಸಭೆ ನೀರು ಪೂರೈಕೆಯಾಗುತ್ತಿತ್ತು. ಜೊತೆಗೆ ಬಾವಿಯ ನೀರು ಸಾಕಾಗುತ್ತಿತ್ತು. ಆದರೆ ಏಪ್ರಿಲ್ ಆರಂಭದಲ್ಲೇ ಬಾವಿ ನೀರು ಬತ್ತಿದ್ದು, ಇದರಿಂದ ನೀರಿನ ಅಭಾವ ಉಂಟಾಗಿದೆ.
ಜಿಲ್ಲಾಸ್ಪತ್ರೆ ಮತ್ತು ಅದರ ಅಧೀನದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ನಿತ್ಯ 8 ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಸಾಕಾಗದೆ ಇರುವುದರಿಂದ ಈ ಹಿಂದಿನಂತೆ ರೋಗಿಗಳಿಗೆ 24 ತಾಸು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಇವತ್ತು ಜಿಲ್ಲಾಧಿಕಾರಿ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.