ಉಡುಪಿ: ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ ಎನ್ನುವ ಮೂಲಕ ಕಾಂಗ್ರೆಸ್ ಸರಕಾರವು, ಸಮಾಜದಲ್ಲಿ ಒಡಕು ಹುಟ್ಟಿಸುವ ಕೆಲಸಕ್ಕೆ ಮುಂದಾಗಿದೆ. ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯುತ್ತದೆ ಎಂಬ ನಂಬಿಕೆ ಇದೆ. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವುದಾದರೆ ನಾವು ವಿರೋಧ ಮಾಡುತ್ತೇವೆ ಎಂದು ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವುಗಳನ್ನು ನಾವು ಮಾತೃ ಸ್ಥಾನದಲ್ಲಿ ಪೂಜಿಸುತ್ತಿದ್ದೇವೆ. ಗೋವು ಹತ್ಯೆ ಹಿಂದು ಧರ್ಮದ ಪ್ರಕಾರ ಅತ್ಯಂತ ಪಾಪದ ಕೃತ್ಯ. ಬದಲಾವಣೆ ಪ್ರಕ್ರಿಯೆ ನಡೆದರೆ ನಾವು ವಿರೋಧಿಸುತ್ತೇವೆ ಎಂದರು.
ಯುಕ್ತಿರಹಿತ ಮಾತುಗಳನ್ನು ಪಶು ಸಂಗೋಪನಾ ಸಚಿವರು ಆಡಬಾರದು. ಹಸು ಎಂಬ ಧಾರ್ಮಿಕವಾದ ಭಾವನೆಗೆ ಏಟು ಕೊಡಬಾರದು. ಗೋವನ್ನು ದೇವತೆ ಎಂದು ಪೂಜೆ ಮಾಡುತ್ತೇವೆ. ಆಧ್ಯಾತ್ಮಿಕ ನಂಬಿಕೆಗೆ ಹೊಡೆತ ಕೊಡಬಾರದು. ಹಿಂದುಗಳ ಆಧ್ಯಾತ್ಮಿಕ ಚಿಂತನೆಗೆ ವ್ಯಂಗ್ಯವಾಗಿ ನಡೆದುಕೊಳ್ಳಬಾರದು ಎಂದು ಹೇಳಿದರು.