ಕುಂದಾಪುರ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನರನ್ನು ಮರಳು ಮಾಡುವ ಕಾರ್ಡ್ ಆಗಿದ್ದು, ಅದನ್ನು ನಂಬಬೇಡಿ. ಬಿಜೆಪಿ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮಾಡಿರುವ ಅಭಿವೃದ್ಧಿಯ ರಿಪೋರ್ಟ್ ಕಾರ್ಡನ್ನು ನೋಡಿ ಯಾರು ಉತ್ತಮರು ಎನ್ನುವುದಾಗಿ ಯೋಚಿಸಿ ಮತ ನೀಡಿ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ನಡೆದ ಮಹಿಳಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಮಾತನಾಡಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ತಾಯಂದಿರು, ಅಕ್ಕ- ತಂಗಿಯರನ್ನು ಕಂಡಾಗ ಬಿಜೆಪಿ ಬಗ್ಗೆ ಬೈಂದೂರಿನ ಮಹಿಳೆಯರಿಗೆ ಅಪಾರ ನಂಬಿಕೆಯಿರುವುದು ಖಾತ್ರಿ ಆಗಿದೆ. ಮುಂಬರುವ ಚುನಾವಣೆಯಲ್ಲಿ ಬೈಂದೂರಲ್ಲಿ ಗುರುರಾಜ್ ಗಂಟಿಹೊಳೆ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುರುರಾಜ್ ಗಂಟಿಹೊಳೆ, ಪ್ರಮೋದ್ ಮಧ್ವರಾಜ್, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಉಸ್ತುವಾರಿ ಬ್ರಿಜೇಶ್ ಚೌಟ, ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಬೈಂದೂರು ಅಧ್ಯಕ್ಷೆ ಭಾಗೀರಥಿ ಸುರೇಶ್, ಪ್ರಮುಖರಾದ ದೀಪಾ, ಶೋಭಾ ಜಿ.ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಿಯದರ್ಶಿನಿ, ಅನಿತಾ ನಿರೂಪಿಸಿದರು.